Tuesday 5 June 2012

ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದು ಬೇಡ.


ಜಾತಿ,ಅಸಮಾನತೆ,ಶೋಷಣೆ,ಪುರೋಹಿತಶಾಯಿಯಂಥ ಕಮಟು ಕಂಧಾಚಾರಗಳಿಗೆ ಸೆಡ್ಡು ಹೊಡೆದು ವಿಶ್ವಮಾನವತೆಯ ಸಂದೇಶ ಸಾರಿದ್ದ ಸಾಹಿತ್ಯ ದಿಗ್ಗಜ,ರಸ ಋಷಿ,ಮಾನವತಾವಾದಿ ಕುವೆಂಪು ಅವರನ್ನು ತಮ್ಮ ಜಾತಿ ಕುಲ ಬಾಂಧವನೆಂದು ಸಮಾವೇಷದಲ್ಲಿ ಮೆರೆದಾಡಿದ ನಮ್ಮ ಒಕ್ಕಲಿಗ ಬಂಧುಗಳ ಮನೋಸ್ಥಿತಿಯನ್ನು ನೋಡಿ ಮರುಕುಂಟಾಗುವುದು.
ಗುಡಿ,ಚರ್ಚು,ಮಸೀದಿಗಳನ್ನು ಬಿಟ್ಟು ಹೊರಬನ್ನಿ...ಎಂದು ಕರೆ ನೀಡಿ ಮನುಜ ಮತವೇ ವಿಶ್ವಮತವೆಂದು ಸಾರಿ ಹೇಳಿದ ಕುವೆಂಪು ಅವರನ್ನು ತಮ್ಮ ಜಾತಿ ನೆಲೆಯಲ್ಲಿ ಅನಾವರಣಗೊಳಿಸಿಕೊಂಡು ಅವರ ಶ್ರೀಮಂತ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಅಪಮಾನ ಮಾಡಿರುವುದು ಖೇದಕರ ಸಂಗತಿಯಾಗಿದೆ. ಯಾವ ಗೊಡ್ಡು ವ್ಯವಸ್ಥೆಯನ್ನು ಕುವೆಂಪು ಅವರು ವಿರೋದಿಸಿ ಅದರಂತೆ ಬಾಳಿದರೋ  ಅದೇ ವ್ಯವಸ್ಥೆಯನ್ನು ವೈಭವೀಕರಿಸಿ ಅವರ ಮಹಾನ್ ವ್ಯಕ್ತಿತ್ವಕ್ಕೆ ಅಕ್ಷರಶಃ ಮಸಿ ಬಳಿಯುವ ಮತ್ತು ಅವರನ್ನು ಒಕ್ಕಲಿಗ ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನೋಭಾವದ ದರ್ಶನವೂ ಆಯಿತು.ಜ್ಞಾನ ಮತ್ತು ಸ್ವಾಭಿಮಾನಗಳೇ ತಮ್ಮ ತಮ್ಮ ಏಳಿಗೆಗೆ ಊರುಗೋಲಾಗಬೇಕು. ಧೀಮಂತ ವ್ಯಕ್ತಿಗಳ ಭಾವ ಚಿತ್ರ,ಹೆಸರುಗಳನ್ನು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವ ಜಾಣತನ ಬೇಡ.ಪುರೋಹಿತಶಾಯಿಯನ್ನು ವೈಭವೀಕರಿಸಿದಷ್ಟೂ ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದೆಂಬ ತಿಳುವಳಿಕೆ ನಮ್ಮ ಬಂಧುಗಳಲ್ಲಿ ಮೂಡಿ ಬರಲಿ.
= ಬನವಾಸಿ ಸೋಮಶೇಖರ್.
   05-06-2012