Monday 21 January 2013

ಶರಣರ ನೈತಿಕ ಮೌಲ್ಯಗಳು.

ಈ ಮಹಾ ಮನೆ, ಅನುಭವ ಮಂಟಪದಲ್ಲಿ ಆಸೀನರಾಗಿರುವ ಎಲ್ಲ ಶರಣರೇ ಮತ್ತು ಶರಣೆಯರೇ,
ನಿಮಗೆಲ್ಲ ಶರಣು ಶರಣಾರ್ಥಿಗಳು.

ಎನಗಿಂತ ಕಿರಿಯರಿಲ್ಲ
ಶಿವ ಭಕ್ತರಿಗಿಂತ ಹಿರಿಯರಿಲ್ಲ
ಎನ್ನ ಮನಸಾಕ್ಷಿ ನಿಮ್ಮ ಪಾದ ಸಾಕ್ಷಿ
ಕೂಡಲ ಸಂಗಮದೇವ ಎನಗಿದೇ ದಿಬ್ಯ!

ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ನಾಡು ಅನುಭಾವಿಗಳು,ಶರಣರು, ದಾರ್ಶನಿಕರು ಮತ್ತು ಸಾಧುಸಂತರು ನೆಲೆಸಿದ ಪಾವನ ಭೂಮಿಯಾಗಿತ್ತು.ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅನುಭಾವವೇ ಪ್ರಧಾನವೆಂದು  ಈ ಬಸವಾದಿ ಪ್ರಮಥರು ಸಾರಿದರು.ವಚನಕಾರರು ಜನ ಸಾಮಾನ್ಯರಿಗೆ ನೈತಿಕ ಜೀವನ ದರ್ಶನ ಮಾಡಿಸಿದರು.ಸಂಸ್ಕೃತದಲ್ಲಿ ನಿಕ್ಷಿಪ್ತವಾಗಿದ್ದ ತತ್ತ್ವಶಾಸ್ತ್ರಗಳು ಕೇವಲ ಪಂಡಿತರು ಮಾತ್ರರಿಗೆ ಮೀಸಲಾಗಿತ್ತೇ ಹೊರತು ಸಾಮಾನ್ಯರಿಗೆ ಎಟಕುವಂತಿರಲಿಲ್ಲ.ಇಂಥ ಸನ್ನೀವೇಷದಲ್ಲಿ ಉದಯಿಸಿದ ವಚನ ಚಳುವಳಿಯ ಅನುಭಾವಿ ದಿಗ್ಗಜರು (ಶರಣರು) ಶಾಸ್ತ್ರ ಗ್ರಂಥಗಳ ಒಳ-ಹೊರ ತಿರುಳು ಮತ್ತು ಅವುಗಳಲ್ಲಿ ಅಡಗಿರುವ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ತಿಳಿಯಾದ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯಕ್ಕೆ ವಚನಗಳನ್ನು ಪ್ರಕ್ಷಿಪ್ತಗೊಳಿಸಿದರು.

ಕ್ರಾಂತಿಯೋಗಿ, ಮಹಾನ್ ಸಮಾಜ ಸುಧಾರಣಾ ಚಳುವಳಿಯ ನೇತಾರನಾಗಿದ್ದ ಬಸವಣ್ಣನವರು 12 ನೇ ಶತಮಾನದಲ್ಲಿ  ಪ್ರಜಾಪ್ರಭುತ್ವದ ಕನಸು ಕಂಡು ಒಂದು ಹೊಸ ಪರಿವರ್ತನಾಶೀಲ ಆದರ್ಶ ಸಮಾಜವನ್ನು ಸರ್ವೋದಯ ತತ್ವದ ತಳಹದಿಯಲ್ಲಿ ನಿರ್ಮಾಣ ಮಾಡುವ ಪಣ ತೊಟ್ಟಿದ್ದರು. ವ್ಯಾಸ ಸಾಹಿತ್ಯ ಪ್ರಕಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಎಲ್ಲ ಶರಣರೂ ಈ ವಿಶ್ವಗುರು ಬಸವಣ್ಣನ ಹಿರಿತನದಲ್ಲಿ ಸಂಪ್ರದಾಯಬದ್ಧ  ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸಿದರು. ಸಮಾಜದ ಸದಸ್ಯರೆಲ್ಲ ಭಕ್ತರೆನಿಸಿದರು, ಶರಣರೆನಿಸಿದರು. ಹೀಗೆ ಬಸವಣ್ಣನವರು 867 ವರ್ಷಗಳ ಹಿಂದೆಯೇ ಜಾತಿಭೇದ, ವರ್ಣಭೇದ,ಲಿಂಗ,ವರ್ಗ,ವರ್ಣ ಮತ್ತು ಕಾಯಕ ಭೇದಗಳಿಲ್ಲದ ಹೊಸ ಶೋಷಣೆ ರಹಿತ ಸರ್ವೋದಯ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದರು, ಅವರ ಸರ್ವ ಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, ಸರ್ವಕಾಲಕ್ಕೂ  ಹೇಗಿರಬೇಕು  ಎಂಬುದಕ್ಕೆ ದಿಕ್ಸೂಚಿಯಾಗಿದೆ.

ಶರಣರ ನೈತಿಕ ಮೌಲ್ಯಗಳು ಶರಣರುಗಳೆಲ್ಲ ಅನುಗ್ರಹಿಸಿರುವ ವಚನಗಳಲ್ಲೇ ಅಡಗಿವೆ.ಬಸವ ಪ್ರಜ್ಞೆಯು ನೈತಿಕ,ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಮತ್ತು ಆರ್ಥಿಕ ಮೌಲ್ಯಗಳನ್ನು ಸಾಕಾರಗೊಳಿಸಿದ ಮಾನವ ಹಕ್ಕುಗಳ ಪ್ರಜ್ಞೆಯಾಗಿದೆ. ಜಾಗತಿಕ ಸಂತ, ವ್ಯೋಮಕಾಯರಾದ ಅಲ್ಲಮ ಪ್ರಭು,ಚೆನ್ನ ಬಸವಣ್ಣ,ಸಿದ್ಧರಾಮ,ಮಾದಾರ ಚನ್ನಯ್ಯ,ಅಂಬಿಗರ ಚೌಡಯ್ಯ,ಡೋಹರ ಕಕ್ಕಯ್ಯ,ಮಡಿವಾಳ ಮಾಚಯ್ಯ,ಸತ್ಯಕ್ಕ,ಕುಂಬಾರ ಗುಂಡಣ್ಣ, ಮುಂತಾಗಿ ನೂರಾರು ಶರಣರು ಬಸವಣ್ಣನವರ ಜಾತ್ಯಾತೀತ, ಪ್ರಜಾ ಪ್ರಭುತ್ವವಾದಿ ಪ್ರಜ್ಞೆಯ ಚೇತನಗಳಾಗಿ ಮೈದುಂಬಿಸಿದರು.ಈ ಆಶಯಗಳೇ ಭಾರತೀಯ ಸಂವಿದಾನದ ನಿಜ ಆಶಯಗಳ ತತ್ವಶಃ ಸಮಾಜವಾದಿ, ಸಮತಾವಾದಿ ಪ್ರಜ್ಞೆಯಾಗಿ ರೂಪುಗೊಂಡಿರುವುದು ಸಾಕ್ಷಿಯಾಗಿದೆ.ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರು ಬಸವಣ್ಣನವರ ಕೂಡಲಸಂಗಮದೇವನಾಗಿದ್ದರ ಸಾಮಾಜಿಕ ಮೌಲ್ಯ ಅತ್ಯಂತ ಶ್ರೇಷ್ಠತಮವಾಗಿದೆ.

"ಲಿಂಗ ವ್ಯಸನಿ ಜಂಗಮ ಪ್ರೇಮಿ" ಎಂದು ಬಸವಣ್ಣನವರು ಹೇಳುವಲ್ಲಿ ಮೌಲ್ಯಗಳಿಂದ ತುಂಬಿದ ಒಳಜಗತ್ತು ಹೊರ ಜಗತ್ತನ್ನು ಆಳಬೇಕೆಂದು ಸೂಚಿಸುತ್ತಾರೆ. ಮಾನವೀಯ ಮೌಲ್ಯಗಳು ಜಗತ್ತನ್ನು ಆಳಬೇಕು. ಆದರೆ ಇಂದು ಮಾರುಕಟ್ಟೆ ಮೌಲ್ಯಗಳು ಜಗತ್ತನ್ನು ಆಳತೊಡಗಿರುವುದು ಅತ್ಯಂತ ದುರದೃಷ್ಠಕರವಾದ ಸಂಗತಿಯಾಗಿದೆ.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವವನು ಭಕ್ತ. ಸಕಲ ವಸ್ತುಗಳೆಲ್ಲ ಬೇಕೆಂಬುವವನು ಭವಿ. ಇಂದಿನ ಜಗತ್ತು ಭವಿಗಳ ಸಾಮ್ರಾಜ್ಯವಾಗಿದ್ದು ಅಟ್ಟಹಾಸಗೈಯುತ್ತಿರುವುದು ದುರಂತವಾಗಿದೆ.ಈ ಜಗತ್ತನ್ನು ಭಕ್ತರ ಸಾಮ್ರಾಜ್ಯ ಮಾಡಿದಾಗ ಮಾತ್ರ ಮೇಲು ಕೀಳಿಲ್ಲದ, ಸುಲಿಗೆ ಇಲ್ಲದ, ಘನತೆವೆತ್ತ ಸ್ವತಂತ್ರ ಮಾನವನ ಉದಯವಾಗುತ್ತದೆ. ಇಂಥ ಹೊಸ ಮನುಷ್ಯರ ಸಮಾಜವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಶರಣಾಗುವುದೆಂದರೆ ಭವದಲ್ಲಿ ಯಾರಿಗೂ ಶರಣಾಗತರಾಗದೆ ಸ್ವತಂತ್ರಧೀರರಾಗಿ ಬದುಕುವುದು ಎಂಬುದಕ್ಕೆ ಬಸವಣ್ಣನವರ ಈ ವಚನ ಮಾರ್ಮಿಕವಾದ ಅರ್ಥವನ್ನು ಒದಗಿಸುತ್ತದೆ. 
                                                                                                                 
"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

"ಕೂಡಲಸಂಗನ ಶರಣರು ಸ್ವತಂತ್ರಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಸ್ವತಂತ್ರಧೀರರ ಸಮಾಜದಲ್ಲಿ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಾಗುತ್ತದೆ. ಇಲ್ಲದಿದ್ದರೆ ಅದು ಸ್ವಾರ್ಥಿಗಳ ಕಮ್ಮಟವಾಗುತ್ತದೆ.

"ದೇವನೊಬ್ಬ ನಾಮ ಹಲವು" ಎಂದು ಬಸವಣ್ಣನವರು ಹೇಳುತ್ತಾರೆ. ದೇವರು ಒಬ್ಬನೇ ಇದ್ದಾನೆ. ಆತ ಸೋಲುವುದೂ ಇಲ್ಲ, ಗೆಲ್ಲುವುದೂ ಇಲ್ಲ ಆದರೆ  ಆತ ಸೃಷ್ಟಿಯ ಸಮತೋಲನವನ್ನು ರಕ್ಷಿಸುತ್ತಾನೆಂಬುದು ಬಸವಣ್ಣನವರ ಪರಿಸರ ಪ್ರಜ್ಞೆ. ಭೌತಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ವಸ್ತುಗಳೊಂದಿಗೆ ಮತ್ತು ಆಂತರಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೆಚ್ಚು ಆನಂದಮಯವಾಗಿ ಬದುಕುವವನೇ ಶರಣನಾಗುತ್ತಾನೆಂಬುದಕ್ಕೆ ಈ ವಚನ ಆರ್ಥಿಕ ಮೌಲ್ಯದ ಶಕ್ತಿಯನ್ನು ತುಂಬಿದೆ;

ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.

ಬಸವಾದಿ ಪ್ರಮಥರು, ಶರಣನಾಗುವುದೆಂದರೆ ಅಹಂಕಾರದ ಮೇಲೆ ವಿಜಯ ಸಾಧಿಸಿದ ವೀರರಾಗಿರುವುದಷ್ಟೇ ಆಗಿರದೇ ನ್ಯಾಯನಿಷ್ಠುರಾಗಿದ್ದು ಪರಿಪೂರ್ಣ ಸತ್ಯಕ್ಕೆ ಮಾತ್ರ ತಲೆಬಾಗುವವರಾಗಿದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಈ ವಚನ ಜೀವಂತಿಕೆಯನ್ನೊದಗಿಸುತ್ತವೆ.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!

ಕೇರಳದ ಮಾರ್ತಾಂಡಂ ರಾಜ್ಯವನ್ನಾಳುತ್ತಿದ್ದ ಮಾರ್ತಾಂಡವರ್ಮ ಮಹಾಶೂರನಾಗಿದ್ದನಲ್ಲದೇ ರಾಜ್ಯವಿಸ್ತಾರದ ಮಹತ್ವಾಕಾಂಕ್ಷಿಯಾಗಿದ್ದ.ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡನಾದರೂ ಬದುಕಿನ ಅರ್ಥ ತಿಳಿಯದೇ ಗೊಂದಲಕ್ಕೀಡಾಗಿ ಗಾಬರಿಯಾದ. ಚಿತ್ತಶಾಂತಿಯಿಲ್ಲದೇ ಭೋಗಲಾಲಸೆ,ವೈಭೋಗದ ಜೀವನದ ಮಧ್ಯೆ ವಿಲವಿಲನೆ ಒದ್ದಾಡತೊಡಗಿದ. ಅಂತಿಮವಾಗಿ ಪದ್ಮನಾಭ ಮಂದಿರಕ್ಕೆ ಹೋಗಿ ತನ್ನ ನೆಚ್ಚಿನ ಖಡ್ಗವನ್ನು ಪದ್ಮನಾಭನ ಪಾದಕ್ಕರ್ಪಿಸಿ ಶರಣಾಗತನಾದ. "ಹೇ,ದೇವರೆ ನಾನು ನಿನಗೆ ಶರಣಾಗತನಾಗಿದ್ದೇನೆ,ನನ್ನೆಲ್ಲ ಆಸೆಗಳನ್ನು ಜಯಿಸಿ ಮಾನಸಿಕ ಕ್ಷೋಭೆ ಮತ್ತು ಒತ್ತಡಗಳಿಂದ ಹೊರಬರುವಂತೆ ಕೃಪೆ ದೋರಿ ರಕ್ಷಿಸೆಂದು ನಿರ್ಮಲ ಮನಸ್ಸಿಂದ ಬೇಡಿದ. ಚಿತ್ತಕ್ಕೆ ಸಮಾಧಾನ ಸಿಕ್ಕೊಡನೆಯೇ ಐಹಿಕ ಜಗತ್ತಿನ ಮೋಹಪಾಶದಿಂದ ಹೊರಬಂದು ಮಾತಾಂಡಂ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಮರು ನಾಮಕರಣಗೊಳಿಸುತ್ತಾನೆ.ಹೀಹೆ ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ ಎಂಬುದಕ್ಕೆ ಈ ವಚನ ಸಾಂದರ್ಭಿಕ ಉದಾಹರಣೆಯಾಗಬಲ್ಲದು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
 ಹೀಗೆ ಶರಣರ ಅನುಭಾವ ಸಂಗಮದಿಂದ ಬದುಕು ಶ್ರೇಷ್ಠವಾಗುವುದೆಂಬುದಕ್ಕೆ ಈ ವಚನ ದಿವ್ಯಾನುಭೂತಿ ನೀಡುತ್ತದೆ.

ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.

  ಶರಣರು ಸಾರಿದ ನೈತಿಕ ಮೌಲ್ಯಗಳು ವಚನ ಸಾಹಿತ್ಯದ ಮೂಲಕ ಇಡೀ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ. ಮಾನವರ ಹಿತ ಕಾಪಾಡುವುದೇ ವಚನ ಸಾಹಿತ್ಯದ ಮುಖ್ಯ ಮೌಲ್ಯವಾಗಿದೆ. ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಮಾರ್ಗದರ್ಶಕವಾಗಿದೆ. ಇಲ್ಲಿಯ ವರೆಗೆ ಲಭ್ಯವಾದ 20 ಸಾವಿರದಷ್ಟು ವಚನಗಳು ಜಗತ್ತಿನ ಎಲ್ಲ ಜನ ಸಮುದಾಯಗಳ ಆಸ್ತಿಯಾಗಿದ್ದು ಬದುಕಿನ ಮೌಲ್ಯಗಳನ್ನು ಬಿತ್ತರಿಸಿವೆ.

ಹೀಗೆ ಎಲ್ಲ ಶರಣರು ಬಸವಣ್ಣನವರ ತತ್ವಾದರ್ಶಗಳನ್ನು ಎತ್ತಿಹಿಡಿದಿದ್ದಾರೆ. ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗತತ್ತ್ವಗಳೆಲ್ಲ ಬದುಕಿನ ಮೌಲ್ಯಗಳಾಗಿದ್ದು ಸಮಾನತೆಯನ್ನು ಸಾರಿದ ಶ್ರೇಷ್ಠ ತತ್ವಗಳಾಗಿವೆ.


Ø  ಅನುಭಾವಿ:ಬನವಾಸಿ ಸೋಮಶೇಖರ್,ಎಂ.ಎ.,ಬಿ.ಇಡಿ
               (ಆಕರ: ವಿವಿಧ ಮೂಲಗಳಿಂದ)

(ಬೆಂಗಳೂರಿನ, ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಸಂಸ್ಥೆಯು ದಿನಾಂಕ:20-01-2013 ರಂದು ಉಡುಪಿ ಜಿಲ್ಲೆಯ ಹಿರಿಯಡ್ಕ-ಕೊಂಡಾಡಿ ಜಂಗಮ ಮಠದಲ್ಲಿ ನಡೆಸಿದ “53 ನೇ ತಿಂಗಳ ಬೆಳಕಿನ ಅಂಗಳದ ಅನುಭಾವ ಸಂಗಮ” ಕಾರ್ಯಕ್ರಮದಲ್ಲಿ ನೀಡಿದ ಅನುಭಾವ ನುಡಿ.)








Monday 14 January 2013

ಕ್ಷಣ ಕತ್ತಲೆಯ ಭಯ: ಕರಿಬಸಪ್ಪನ ಕತ್ತಲಾದ ಬದುಕಿನ ಕಥೆ!


ಪ್ರಿಯ ಶ್ರೀಧರ್,

ನಿಮ್ಮ, ಅಮ್ಮನ ಆಟೋಗ್ರಾಫ್ ಕಥಾ ಸಂಕಲನದ ಮೊದಲ ಕಥೆ 'ಕ್ಷಣ ಕತ್ತಲೆಯ ಭಯ'ವನ್ನು ಓದಿದೆ.ಮೊದಲು ಕ್ಲೀನರ್ ಆಗಿ ನಂತರ ಲಾರಿಯೊಂದರ ಡ್ರೈವರ್ ಆಗಿದ್ದ ಕರಿಬಸಪ್ಪನ ಜೀವನ ಗಾಥೆಯನ್ನು ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಿಸಲಾಗಿದೆ.13-01-2013 ರಾತ್ರಿ 10-30 ರಿಂದ 11-47 ಅವಧಿಯಲ್ಲಿ ತದೇಕಚಿತ್ತದಿಂದ ಕಥಾ ಸಂಕಲನದ ಮೊದಲ ಕಥೆಯನ್ನು ಓದಿದೆ.ನಿಮ್ಮ ಪ್ರೀತಿಯ ಸ್ನೇಹಕ್ಕಾದರೂ ಚೊಚ್ಚಲ ಕೃತಿಯನ್ನು ಓದಿ ಅಭಿಪ್ರಾಯಿಸಬೇಕೆಂಬ ಹಂಬಲ ನನ್ನದು.ಕಥೆ ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಮೂಡಿಸಿ ಓದಿಸಿಕೊಳ್ಳುತ್ತದೆ.

ಪ್ರೀತಿಯ ಸುಖ ದಾಂಪತ್ಯದಲ್ಲಿ ಮೈಮರೆತ ಹೆಣ್ಣೊಬ್ಬಳು ಮುದುವೆಗೆ ಮುಂಚೆ ಪ್ರೀತಿಸಿದಾತನೊಂದಿಗಿದ್ದು ಅನುರಕ್ತರಾದ ಘಟನೆಯನ್ನು ಗಂಡನ ಬಳಿ  ಪ್ರಾಮಾಣಿಕವಾಗಿ ಹೇಳಿಕೊಂಡು ತನ್ನ  ಇಡೀ ಭವಿಷ್ಯವನ್ನೇ ಕತ್ತಲೆಯ ಕೂಪಕ್ಕೆ ತಳ್ಳಿಕೊಳ್ಳುತ್ತಾಳೆ.ಆಕೆಯ ಪ್ರಾಮಾಣಿಕತೆ ಯಾಕಾದರೂ ಬೇಕಿತ್ತೆಂದು ಪ್ರಶ್ನಿಸಿ ಕರುಳನ್ನು ಚುಚ್ಚುತ್ತದೆ.ಯಾವ ಅಭಲೆಯೂ ಇಂಥ ದುಃಸ್ಥಿತಿಗೆ ತನ್ನ ಸಂಸಾರ ಸುಖವನ್ನೇ ಬಲಿಕೊಟ್ಟುಕೊಳ್ಳುವ ಕಟು ಸತ್ಯಕ್ಕೆ ಶರಣಾಗದಿರಲೆಂದು ಕಥೆಯನ್ನು ಓದುವ ಸಹೃದಯಿಗೆ ಆಗದೇ ಇರಲಾರದು.ಕ್ಷಣ ಕತ್ತಲೆಯ ಭಯ,ಕಥೆಗೆ ಸೊಗಸಾದ ಶೀರ್ಷಿಕೆಯನ್ನು ಒದಗಿಸಿದ್ದು ಭಾವನೆಗಳಿಗೆ ತಕ್ಕಂತೆ ಪಾತ್ರಗಳನ್ನು ನಿರೂಪಿಸಿ ಅರ್ಥವಂತಿಕೆಯನ್ನು ಮೆರೆದಿದೆ.ಯಾರ ಬದುಕೂ ಹೀಗಾಗಬಾರದು.

ಕರಿಬಸಪ್ಪನ ವೈಯಕ್ತಿಕ ಬದುಕೇನು ಶುದ್ಧಹಸ್ತವಾಗಿರಲಿಲ್ಲ.ಒಳ್ಳೆಯ ವ್ಯಕ್ತಿಯಾಗಿದ್ದರೂ ಪರಸ್ತ್ರೀ ಸಂಗ,ಕುಡಿತಗಳ ದಾಸನಾಗಿದ್ದವನು!ಇಂಥ ವ್ಯಕ್ತಿತ್ವದ ಆತ ತನ್ನ ಜೀವನಕ್ಕೇ ತನ್ನನ್ನೇ ಅನ್ವಯಿಸಿಕೊಂಡು ಸಹಧರ್ಮಿಣ ಹೇಳಿದ ಪ್ರಾಮಾಣಿಕ ಸತ್ಯವನ್ನು ಅರಗಿಸಿಕೊಂಡು ಜೀವನ ಸಾಗಿಸುವ ಹೃದಯವಂತಿಕೆ ಆತನಲ್ಲಿ ಮೂಡಬೇಕಿತ್ತು.ಆದರಾತ ಮಾಡಿದ್ದೇನು? ಅರೆಕ್ಷಣದ ಕೋಪಕ್ಕೆ ಹೆಂಡತಿ ಮತ್ತು ತನ್ನ ಮುದ್ದಿನ ಹೆಣ್ಣು ಕೂಸನ್ನು ದಿಕ್ಕಾಪಾಲಾಗಿಸಿ  ಹೊರಟು ಹೋಗಿ ಬಿಟ್ಟಿದ್ದ.ಆದರೂ ಧೃತಿಗೆಡದೇ ತಾಯಿ ಮಗಳು ತಮ್ಮ  ಪಾಡಿಗೆ ತಾವಿದ್ದರಾದರೂ ಗಂಡನನ್ನು ಹುಡುಕಿಕೊಳ್ಳುವ ದಿಟ್ಟ ಪ್ರಯತ್ನವನ್ನಂತೂ ಬಿಟ್ಟಿರಲಿಲ್ಲ!ಬರಮಘಡದಲ್ಲಿ ತನ್ನ    ಗಂಡನಿರುವನೆಂಬ ಸುದ್ದಿ ಕೇಳಿ ತಿಳಿದಿದ್ದ ಅವಳು ಮಗಳೊಂದಿಗೆ ಭರಮಘಡಕ್ಕೆ ಹೊರಟಾಗ ವಿಧಿಯ ಅಟ್ಟಹಾಸವೂ ಎಂಬಂತೆ ಅರಿವಿಲ್ಲದೇ  ಗಂಡನ ಲಾರಿಯ ಗಾಲಿಗಳಿಗೆ ಆಹುತಿಯಾಗುವ ಕ್ಷಣದ ಘಟನೆ ಕರಿಬಸಪ್ಪನಿಗೂ ತಿಳಿಯದ ಹಾಗೆ ಕರುಣಾಜನಕ ಕಥೆಯನ್ನು ಚಿತ್ರಿಸಲಾಗಿದೆ.

ಕುಡಿದ ಅಮಲಿನ ಅರೆಗಳಿಗೆಯಲ್ಲಿ  ಹೆಂಡತಿ ಮತ್ತು ಮಗಳು ಇಬ್ಬರೂ ತನ್ನ ಲಾರಿಗೆ ಆಹುತಿಯಾಗುವ ಆಘಾತಕಾರಿ ಸನ್ನೀವೇಷ,ಕರಿಬಸಪ್ಪನ ಮುಂದಿನ ಇಡೀ ಜೀವಿತಕ್ಕೆ ಘೋರ ಶಿಕ್ಷೆಯನ್ನೇ ನೀಡಿ ಕಥೆಯನ್ನು ಕಟ್ಟಿದ ರೀತಿ ಮೆಚ್ಚುವಂತದ್ದು.ಆದಷ್ಟು ಬೇಗ ಹೆಂಡತಿಯನ್ನು ನೋಡಬೇಕು,ಮಗಳ ಮದುವೆ ಮಾಡಬೇಕು ಎಂಬ ಮಹದಾಸೆಯಿಂದ 20 ವರ್ಷಗಳ ನಂತರ ಕೈ ತುಂಬಾ ಹಣ ಹಿಡಿದುಕೊಂಡು ಮಗರಾಣಿಗೆ ಬರುವ ಡ್ರೈವರ್ ಕರಿಬಸಪ್ಪನನ್ನು ವಿಧಿ ಅತ್ಯಂತ ನಿಷ್ಕರುಣಿಯಂತೆ ನಡೆಸಿಕೊಂಡಿತು ಎನಿಸುತ್ತದೆ.ಕಥೆಯಲ್ಲಿನ ಪಾತ್ರ,ಸನ್ನೀವೇಷಗಳು ಕಾಲ್ಪನಿಕವೆನಿಸುವುದಿಲ್ಲ.ಇದೊಂದು ಸತ್ಯ ಘಟನೆಯೇ ಎಂಬುದು ಓದುತ್ತಾ ಹೋದ ಹಾಗೆ ವ್ಯಕ್ತವಾಗುತ್ತಾ ಮಮ್ಮಲ ಮರುಗುವಂತಾಗುವುದು.
ಒಂದು ಸುದೀರ್ಘವಾದ ಕಥೆಯನ್ನು ಅತ್ಯಂತ ಕರುಣಾಜನಕವಾಗಿ,ಅಂತಃಕರಣವನ್ನು ಚುರ್ ಗುಟ್ಟಿಸುವಂತೆ,ಮನೋವಿಶ್ಲೇಷಣೆಗೆ ಒಳಪಡಿಸಿ ಹೆಣೆದಿರುವಿರಿ.ಮಗರಾಣಿಯ ಹೆಣ್ಣನ್ನು (ಅವಳ ಹೆಸರನ್ನು ಪ್ರಸ್ತಾಪಿಸಿಲ್ಲ) ಮದುವೆಯಾದ ಕರಿಬಸಪ್ಪನ ಊರನ್ನು ಮಾತ್ರ ಕಥೆಯಲ್ಲಿ ನನಗೆ ಗುರುತಿಸಲಾಗಿಲ್ಲ! ಬಹುಶಃ ಆತ ನಮ್ಮೂರಿನವನೇ ಆಗಿರಬಹುದೇ?

ಪ್ರೀತಿಯಿಂದ,

ಬನವಾಸಿ ಸೋಮಶೇಖರ್.




Tuesday 8 January 2013

ಮೈಸೂರಿನಲ್ಲಿ 'ಫಕೀರ' ಅವರ " ಅಮ್ಮನ ಆಟೋಗ್ರಾಫ್ " ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.


ಮೈಸೂರಿನಲ್ಲಿ 'ಫಕೀರ' ಅವರ  "ಅಮ್ಮನ ಆಟೋಗ್ರಾಫ್" ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.
ಮೈಸೂರು .7.2013: ನಾಡಿನ ಪ್ರಖ್ಯಾತ ಕಥೆಗಾರ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಸಿದ್ಧ ಲೇಖಕ,ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳ ಜೊತೆಗೆ ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ (ಫಕೀರ) ಅವರ 'ಅಮ್ಮನ ಆಟೋ ಗ್ರಾಫ್'  ಎಂಬ ಕಥಾ ಸಂಕಲನ, ಮೂರು ಸತ್ವಪೂರ್ಣ ಕೃತಿಗಳ ಬಿಡುಗಡೆ ಸಮಾರಂಭವು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜನವರಿ 6,2013 ರಂದು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಬೆಂಗಳೂರಿನ ಪಂಚಮಿ ಮೀಡಿಯಾ ಪಬ್ಲಿಕೇಶನ್ ಸಂಸ್ಥೆಯು ಹೊರತಂದಿರುವ ಮೂರು ಕೃತಿಗಳನ್ನು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹೆಸರಾಂತ ಸಾಹಿತ್ಯ ದಿಗ್ಗಜ,ಪಂಪ ಪ್ರಶಸ್ತಿ ಪುರಸ್ಕೃತ ಡಾ||ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ರತ್ನ ಡಾ|| ಸಿ.ಪಿ.ಕೆ.ಅವರು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಗೈದರು.

ಫೇಸ್ ಬುಕ್ ಸಾಮಾಜಿಕ ಅಂತರ್ ಜಾಲ ತಾಣದಲ್ಲಿ ಸಕ್ರೀಯವಾಗಿದ್ದು ಸಾಹಿತ್ಯ ಸೇವೆಯಲ್ಲಿ ಅರ್ಥವತ್ತಾಗಿ ತೊಡಗಿಸಿಕೊಂಡಿರುವ "ಕನ್ನಡ ಬ್ಲಾಗ್" ವೇದಿಕೆಯ ಬಹುಪಾಲು ನಿರ್ವಾಹಕರು ಸ್ವತಃ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.ಶ್ರೀಧರ ಬನವಾಸಿ (ಫಕೀರ) ಅವರ ಚೊಚ್ಚಲ ಕೃತಿ ಲೋಕಾರ್ಪಣೆಗೊಳ್ಳುವ ಸುಸಂದರ್ಭದಲ್ಲಿ ಅವರ ಆತ್ಮೀಯ ವಲಯದ ಗೆಳೆಯನಾದ ನಾನು ಪಾಲ್ಗೊಳ್ಳವುದೆಂದು ಮೊದಲೇ ಸಂಕಲ್ಪವಾಗಿತ್ತು! ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಲ್ಲಿಯೇ ಪಾಲ್ಗೊಳ್ಳುವ ಆತ್ಮೀಯ ಕವಿ ಗೆಳೆಯರಾದ ಶ್ರೀ ಪುಷ್ಪರಾಜ್ ಚೌಟ ಅವರು ತಮ್ಮ ಫೇಸ್ ಬುಕ್ ಪ್ರೋಫೈಲ್ ಸ್ಟೇಟಸ್ ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾಗವಹಿಸುವ ಇಚ್ಚೆ ಯಿಂದ ಪ್ರಕಟಣೆ ಭಿತ್ತರಿಸಿ ತಮ್ಮ ಗೆಳೆಯರನ್ನು ಸಹ ಪಾಲ್ಗೊಳ್ಲಲು ಪ್ರೇರೇಪಿಸಿದರು.ಅದರಂತೆ ನಾನೂ ಸಹ ಹೊರಟಿದ್ದೇನೆಂಬ ವಿಷಯ ತಿಳಿದೊಡನೆಯೇ ನಮ್ಮ ಬ್ಲಾಗಿನ ನಿರ್ವಾಹಕರೆಲ್ಲರೂ ಮೈಸೂರಿಗೆ ತೆರಳಲು ಅಣಿಯಾದರು. ಅಂದುಕೊಂಡಂತೆ ನಾನು ಮಂಗಳೂರಿನಿಂದ ಹೊರಟೆ.ಬೆಂಗಳೂರಿನಿಂದ ಗೆಳೆಯರಾದ ಪುಷ್ಪರಾಜ್ ಚೌಟ,ಸತೀಶ ಡಿ.ಆರ್.ರಾಮನಗರ,ಫರೇಶ್ ಸರಾಫ್ ಹೊರಟರು.ಮೈಸೂರಲ್ಲೇ ಇರುವ ಪ್ರಸಾದ್ ವಿ.ಮೂರ್ತಿ,ಪ್ರಮೋದ ಪಮ್ಮು ಮತ್ತು ಗಣೇಶ್  ಇವರುಗಳು ನಮ್ಮ ಜೊತೆಯಾದರು ಹಾಗೂ ನಮ್ಮ ಕನ್ನಡ ಬ್ಲಾಗಿನ ಕ್ರಿಯಾಶೀಲ ಸದಸ್ಯರಾದ ಮೈಸೂರಿನ ಸಹೋದರಿ ಸುನೀತಾ ಮಂಜುನಾಥ ಮತ್ತು  ಬೆಂಗಳೂರಿನ ಕೃಷ್ಣ ಮೂರ್ತಿ  ಎಮ್.ಎಸ್.ಅವರು ಸಹ ನಮ್ಮ ಕೈ ಜೋಡಿಸಿದರು.ನಾವೆಲ್ಲರೂ ಒಟ್ಟಾಗಿ ಸೇರಿ ಉಪಸ್ಥಿತರಿದ್ದು ಶುಭಕೋರಿದೆವು.

ಸಂದರ್ಭದಲ್ಲಿ ಮೂರೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ|| ಸಿ.ಪಿ.ಕೆ, ಫಕೀರ ಅವರ 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನದ ಜೊತೆಗೆ ಬಿಡುಗಡೆಗೊಳಿಸುತ್ತಿರುವ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳು  ವಾಸ್ತವವಾಗಿ ಕಾವ್ಯಶಕ್ತಿಯನ್ನು ಪಡೆದುಕೊಂಡು ಸೊಗಸಾಗಿ ರಚಿತಗೊಂಡಿವೆ. ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರದಲ್ಲಿ  ಒಂದು ಪ್ರತ್ಯೇಕ ಸಾಹಿತ್ಯ ರೂಪ ಪಡೆದು ಓದುಗ ವರ್ಗಕ್ಕೆ ಆಸಕ್ತಿಯನ್ನು ಕೆರಳಿಸುವಂತೆ ಮೂರು ಕೃತಿಗಳು ರಚನೆಗೊಂಡಿವೆ ಎಂದರು.ಕಾವ್ಯ ಎಂಬುದು ಒಂದು ಸರ್ವಾಂತರ್ಯಾಮಿ ಶಕ್ತಿಯಾಗಿದ್ದು 'ಕಾವ್ಯೇಷು  ನಾಟಕಂ ರಮ್ಯಂ' ಎಂಬಂತೆ ಎಲ್ಲ ರಚನೆಗಳಲ್ಲಿ ಕಾವ್ಯಾಂಶದ ಹರಿವು ದಟ್ಟವಾಗಿ ಹರಿದಾಡಿದೆ ಎಂದು  ಅವರು ಕೃತಿಗಳನ್ನು ಬಣ್ಣಿಸಿದರು.ಕಥೆ ಕವನಗಳು ಗದ್ಯರೂಪದಲ್ಲಿದ್ದರೂ ಭೇದ ಔಪಚಾರಿಕವಾಗಿದ್ದು ಕಾವ್ಯಶಕ್ತಿಯನ್ನು ಪಡೆದುಕೊಂಡು ಅಕ್ಷರ ರೂಪ ಪಡೆದಿರುವ ಮೂರು ಕತೃಗಳ ರಚನೆಗಳು ಸತ್ವಪೂರ್ಣವಾಗಿ ಹೊರಹೊಮ್ಮಿರುವುದಾಗಿ ಕೃತಿಗಳ ಕುರಿತು ವಿಷಧೀಕರಿಸಿದರು.

ಸಂತೆಯೊಳಗೆ ಕಳೆದು ಹೋದ 'ಸಂತ'ಕವಿ ವೀರಭದ್ರ

'ಮಂಕು ಮಡೆಯನ ಕೊಂಕು ನುಡಿಗಳು' ಕೃತಿಯು ಕಾಲಾತೀತವಾಗಿದ್ದು ಮುವತ್ತು ವರ್ಷಗಳ ನಂತರ ಪ್ರಕಟಗೊಂಢಿದ್ದರೂ ಸಕಾಲಿಕ ಸ್ವರೂಪ ಪಡೆದಿದೆ.ಎಲ್ಲ ಕಾವ್ಯವೂ ಸಮಕಾಲೀನವಾಗುತ್ತವೆ ಎಂದು ತಿಳಿಸಿದ ಸಿ.ಪಿ.ಕೆ ವೀರಭದ್ರ ಅವರ ಕೃತಿಯಲ್ಲಿ ಇರುವುದೆಲ್ಲವೂ ವೀವೇಕದ ಅನುಭವ ಸಂಪನ್ನ ಉಕ್ತಿಗಳಾಗಿದ್ದು ವಕ್ರೋಕ್ತಿಗಳಂತೆ ಸುಂದರವಾಗಿ ಚಿತ್ರಿತಗೊಂಡಿವೆ ಎಂದು ವಿವರಿಸಿದರು.ಸಂತೆಯೊಳಗೆ ಕಳೆದು ಹೋದ ಒಬ್ಬ ಸಂತ ಕವಿ 'ವೀರಭದ್ರ' ಅವರಾಗಿದ್ದು ವ್ಯಾಖ್ಯೆ,ವಿಡಂಬನೆ,ಬೋಧೆಗಳನ್ನು ಸ್ವಂತಿಕೆಯೊಡನೆ,ಸರ್ವೋದಯದ ಆದರ್ಶ ತತ್ವಗಳನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ಅತ್ಯಂತ ಮಾರ್ಮಿಕವಾಗಿ ನುಡಿದರು. ಇಂಥ ಕವಿ ಸಹೃದಯಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ   ಹುಚ್ಚು ಸಂತೆಯಲ್ಲಿ   ಸಂತ ಕವಿ ಕಳೆದು ಹೋಗಿದ್ದಾರೆಂದು ಸರ್ಕಾರದ ಕುರುಡು ವ್ಯವಸ್ಥೆಗೆ ಛಾಟಿ ಏಟು ನೀಡಿದರು.


ಸಾಮಾಜಿಕ ಧ್ವನಿ ಪ್ರಜ್ಞೆಯ ಸಂಖ್ಯೇತ 'ಭುವಿಬಾಲೆ'

ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ ಭುವಿಬಾಲೆ ಕೃತಿ ಕುರಿತು ಮಾತನಾಡಿದ ಸಿ.ಪಿ.ಕೆ, ಪ್ರೀತಿಯ ಕಾವ್ಯವಾಗಿ,ಬೆಳಕಿನ ಕಾವ್ಯವಾಗಿ ನವೋದಯ ಮತ್ತು ಬಂಡಾಯ ಸಾಹಿತ್ಯವೆಂಬ ಎರಡು ಪ್ರಧಾನ ಮಾರ್ಗಗಳಲ್ಲಿನ ಮೂಸೆಯಲ್ಲಿ ಈ ಕವನ ಸಂಕಲನವು ಮೂಡಿಬಂದಿದೆ ಎಂದರಲ್ಲದೇ  ಸಾಮಾಜಿಕ ಧ್ವನಿ ಪ್ರಜ್ಞೆಯನ್ನು ಮೆರೆದಿರುವ ಗಟ್ಟಿಕಾವ್ಯವಾಗಿದೆ ಹೊರಹೊಮ್ಮಿದೆ ಎಂದು ಸೊಗಸಾಗಿ ವಿವರಿಸಿದರು.ಹೃದಯಸ್ಪರ್ಷಿಯಾದ ಹೆಣ್ಣಿನ ಹಾಡಿನ ಕರುಣಾ ಜನಕ ಕವನವೇ ಭುವಿಬಾಲೆಯಾಗಿದೆ. ಹೂತು ಹೋದ ಮನುಷ್ಯ ಪ್ರೀತಿಯ ಸೆಲೆಯನ್ನು ಚಿತ್ತಾಕರ್ಷಕವಾಗಿ ಮನಮುಟ್ಟುವಂತೆ ವಿವರಿಸುವ ಕೃತಿ ಇದಾಗಿದ್ದು ಓದಿ ಆಸ್ವಾದನಗೊಳಿಸುವುದೆಂದು ಸಿ.ಪಿ.ಕೆ ತಿಳಿಸಿದರು.

ಮನಕಲುಕುವ ಕಥೆಗಳ ಸುಂದರ ನಿರೂಪಣೆಯೇ 'ಅಮ್ಮನ ಆಟೋಗ್ರಾಫ್'
ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ(ಫಕೀರ) ಅವರ ಕೃತಿ ಕುರಿತು ಅತ್ಯಂತ ಹರ್ಷಚಿತ್ತರಾಗಿ ಅನಿಸಿಕೆ ವ್ಯಕ್ತಪಡಿಸಿದ ಡಾ|| ಸಿ.ಪಿ.ಕೆ.ಅವರು ವಿಶಿಷ್ಟ ಗುಣವುಳ್ಳ ಅರ್ಥವತ್ತಾದ ಶೀರ್ಷಿಕೆ ಹೊತ್ತು ಹೊರಬಂದಿರುವ "ಅಮ್ಮನ ಆಟೋಗ್ರಾಫ್" ಕಥಾ ಸಂಕಲನವು ಮನಕಲುಕುವ ಕಥೆಗಳನ್ನು ಒಳಗೊಂಡಿರುವ ಸುಂದರ ನಿರೂಪಣೆಯಾಗಿದೆ ಎಂದರು.ತೀರ ಸರಳವಾಗಿಲ್ಲದ ಸಂಕೀರ್ಣ ಕಥೆಗಳನ್ನು ಹೆಣೆದಿರುವ ಶ್ರೀಧರ್ 'ಫಕೀರತ್ವ" ನೈಜ ತತ್ವವನ್ನು ಕೃತಿಯಲ್ಲಿಯೇ ನಿರೂಪಿಸಿದ್ದಾರೆಂದರು.ಸೌಧಾಮಿನಿ ಅಪಾರ್ಟಮೆಂಟ್ 'ಸೌಧಾಮಿನಿಯ ಕಥೆಯಂತೂ ವಾಸ್ತವವಾಗಿದೆ ಎಂದುಕೊಂಡೆ,ಆದರೆ ಅದು ಭ್ರಾಮಕ ಜಗತ್ತಿನ ರೋಚಕ ಹಾಗೂ ಕಾವ್ಯಾತ್ಮಕ ಕಥೆಯಾಗಿದೆ' ಎಂದು ಅರ್ಥಪೂರ್ಣವಾಗಿ ಬಣ್ಣಿಸಿದರು.ಫಕೀರನ ಬರಹ ಶಕ್ತಿಯಲ್ಲಿ ಹೊಸ ವಸ್ತು ನಾವಿನ್ಯತೆಯನ್ನೂ ನಿರೂಪಣೆಯ ನವ್ಯತೆಯನ್ನೂ ಕಾಣಬಹುದಾಗಿದ್ದು ಸತ್ವಯುತ ಶ್ರೀಮಂತ ಕವಿ ಕಥೆಗಾರನಾಗುವ ಲಕ್ಷಣವನ್ನು "ಅಮ್ಮನ ಆಟೋಗ್ರಾಫ್" ಕೃತಿಯಲ್ಲಿ ಮೂಡಿಸಿದ್ದು ಫಕೀರ ಕನ್ನಡ ನಾಡಿನ ಮನೆಮಾತಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಮೂರು ವಿಶಿಷ್ಟ ಕೃತಿಗಳ ಬಿಡುಗಡೆ ಜೊತೆಯಲ್ಲಿಯೇ ಅಧ್ಯಾಪಕ,ಅನುವಾದಕ,ಕವಿ,ಕಥೆಗಾರರಾಗಿ ಹೆಸರುವಾಸಿಯಾಗಿರುವ ಪ್ರೋ.ವೀರಭದ್ರ ಅವರಿಗೆ "ಸಮ್ಮಿಲನ ಸಾಹಿತ್ಯ ಪ್ರಶಸ್ತಿ"ನೀಡಿ ಗೌರವಿಸಲಾಯಿತು.ನಂತರ ಮೂರೂ ಕೃತಿಗಳ ಬಗ್ಗೆ ಪ್ರಸಿದ್ದ ಲೇಖಕರಾದ ಡಾ|| ಮಳಲಿ ವಸಂತ ಕುಮಾರ್, ಡಾ||ಕೆ.ಲೀಲಾ ಪ್ರಕಾಶ್ ಮತ್ತು ಪ್ರೋ.ಮಲೆಯೂರು ಗುರುಸ್ವಾಮಿ ಅರ್ಥಪೂರ್ಣವಾಗಿ ಮಾತನಾಡಿ ಪರಿಚಯಿಸಿದರು.ನಂತರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಇಡೀ ಸಮಾರಂಭಕ್ಕೆ ಕಳೆಯನ್ನು ನೀಡಿದ ಡಾ|| ದೇ.ಜವರೇ ಗೌಡ (ದೇಜಗೌ) ಅವರು ಸಮಾರೋಪ ಭಾಷಣ ಮಾಡಿದರು.ನಮ್ಮ ಸಮಯ ಮೀರಿದ್ದರಿಂದ ಸ್ವಸ್ಥಾನಗಳಿಗೆ ತೆರಳಬೇಕಿದ್ಗರಿಂದ ಹೊರಡುವುದು ಅನಿವಾರ್ಯವಾಯಿತು.ಹೀಗಾಗಿ ದೇಜಗೌ ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಲಲು ನನಗೆ ಸಾಧ್ಯವಾಗಿಲ್ಲ.

ಗಾಯಕಿ ಶಾಂತಾ ಜಗದೀಶ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಪಂಚಮಿ ಪ್ರಕಾಶನದ ಶ್ರೀಧರ್ ಬನವಾಸಿ ಎಲ್ಲರನ್ನೂ ಸ್ವಾಗತಿಸಿದರು.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಮ್ ಶ್ರೀಧರ್ ಪ್ರಾಸ್ತಾವಿಕ ನುಡಿಗೈದರು.ಕುವಲ ಯಲ್ಲಪ್ಪ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಗಣ್ಯ ಸಾಹಿತಿಗಳು,ಚಿಂತಕರು,ಲೇಖಕರು ಮತ್ತು ಉದಯೋನ್ಮುಖ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಇಡೀ ಸಮಾರಂಭವನ್ನು ಶೋಭೆಗೊಳಿಸಿದರು.

ಬ್ಲಾಗ್ ಗೆಳೆಯ ಗಣೇಶ್ ಅವರು ನಮಗೆ ವಿಶೇಷವಾದ ಮಧ್ಯಾಹ್ನದ ಆದರಾತಿಥ್ಯ ನೀಡಿದರು.ರಾತ್ರಿ ಗೆಳೆಯ ಪುಷ್ಪರಾಜ್ ಅವರು ಔತಣ ನೀಡಿ ನೆನಪು ಚಿರವಾಗಿರುವಂತೆ ಮಾಡಿದರು.ಪ್ರಸಾದ ಮತ್ತು ಪಮ್ಮು ನಮ್ಮೊಂದಿಗೆ ಬೆರೆತುಕೊಂಡು ಪ್ರೀತಿಯಿಂದ ನೋಡಿಕೊಂಡರು.ಸತೀಶ,ಪುಷ್ಪರಾಜ್ ಮತ್ತು ಫರೇಶ ಅವರು ನನ್ನನ್ನು ನಕ್ಕು ನಲಿಸಿ ಸ್ನೇಹ ಹಸಿರಾಗಿಸಿದರು.ಗೆಳೆಯ ಶ್ರೀಧರ ಅವರ ಕಥಾ ಸಂಕಲನದ ಬಿಡುಗಡೆಯ ದಿನವು ನಮ್ಮ ಜೀವಮಾನದ ಅವಿಸ್ಮರಣೀಯ ದಿನವಾಯಿತೆಂದು ಬೇರೆ ಹೇಳ ಬೇಕೆ?
ವರದಿಬನವಾಸಿ ಸೋಮಶೇಖರ್.