Wednesday 28 December 2011

ನೆನಪಿನ ಬುತ್ತಿಯಿಂದ:ಬನವಾಸಿಯ ಕೊಟ್ರೇಶಪ್ಪ ಗುರು ಬಸಪ್ಪ ದಾವಣಗೆರೆ.

ನಮ್ಮೂರ ಹಿರಿಯ ಜೀವಗಳಲ್ಲಿ ಒಂದಾಗಿದ್ದ ಶ್ರೀ ಕೊಟ್ರಪ್ಪ ಗುರು ಬಸಪ್ಪ ದಾವಣಗರೆ ಇವರು ಇಂದು ಬೆಳಗಿನ ಜಾವ 4:40 ರ ಹೊತ್ತಿನಲ್ಲಿ ಇನ್ನಿಲ್ಲವಾದರೆಂಬ ಸುದ್ಧಿ ಅವರ ಮಗ ಮಹೇಶ ಅವರ ಮೊಬೈಲ್ ಸಂದೇಶದ ಮೂಲಕ ಗೊತ್ತಾದಾಗ ಒಂದು ಕ್ಷಣ ಮೂಕನಾದೆ!ಕೆ.ಜಿ.ದಾವಣಗೆರೆಯವರು ನನ್ನ ಮನಸ್ಸಲ್ಲಿ ಸದಾಕಾಲ ಇರುವ ವ್ಯಕ್ತಿಯಾಗಿದ್ದರು.ನನ್ನ ಬದುಕಿನ ಹಲವು ಸಾಧನೆಗಳ ಮುನ್ನೋಟಕ್ಕೆ ಅವರು ಮಾರ್ಗದರ್ಶಿಯಾಗಿದ್ದರು.ಒಂದು ಕಾಲದಲ್ಲಿ ಬನವಾಸಿ ಸೀಮೆಯಲ್ಲಿ ವ್ಯಾಪಾರ- ವಹಿವಾಟು,ವಾಣಿಜ್ಯೋದ್ಯಮ ಮುಂತಾದ ವ್ಯವಹಾರಗಳಲ್ಲಿ ಶ್ರೀಯುತರು ಎತ್ತಿದ ಕೈಯಾಗಿದ್ದರು.ತುಂಬಾ ಬುದ್ಧಿವಂತರೂ ತೀಕ್ಷ್ಣ ದೃಷ್ಠಿಯುಳ್ಳವರೂ ಉತ್ತಮ ಸಂವಹನಶೀಲರೂ ಆಗಿದ್ದ ಅವರು ಬನವಾಸಿಯಲ್ಲಿ ತಮ್ಮದೇ ಆದ ಒಂದು ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರು.ನನಗೆ ಗೊತ್ತಿದ್ದಂತೆ ಬನವಾಸಿಯಲ್ಲಿ ಪ್ರಥಮ ಬಾರಿಗೆ ಅವಲಕ್ಕಿ ಮತ್ತು ಶೇಂಗಾ ಎಣ್ಣೆಯ ಗಿರಣಿಯನ್ನು ಪ್ರಾರಂಭಿಸಿ ಬನವಾಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಶ್ರೇಯಸ್ಸು ಅವರದು.ಚುರುಕುತನದ ಬುದ್ಧಿವಂತಿಕೆಯ ವ್ಯಾಪಾರ ಜಾಣ್ಮೆಯು ಅವರ ಕುಟುಂಬವನ್ನು ಉನ್ನತಿಗೆ ತಂದಿತ್ತು.ಒಬ್ಬ ಯಶಸ್ವಿ ವ್ಯಾಪಾರೋದ್ಯಮಿಯಾಗಿದ್ದ ಅವರು ಕಾಲಬದಲಾದಂತೆ ಹಿನ್ನಡೆ ಅನುಭವಿಸಿದ್ದರು.ಅವರ ಚಿನ್ನದಂತ ಮಗ ಮಧು ಅಕಾಲಿಕ ಮರಣಕ್ಕೆ ತುತ್ತಾದ ಮೇಲಂತೂ ಅವರ ಇಡೀ ಕುಟುಂಬದ ಜಂಘಾಬಲವೇ ಉಡುಗಿ ಹೋಗಿತ್ತು.ಆತ 9ನೇ ತರಗತಿಯಲ್ಲಿದ್ದಾಗ ಶಿವರಾತ್ರಿಯ ಸಂದರ್ಭದಲ್ಲಿ ನಮ್ಮೂರ ವರದಾ ನದಿಯಲ್ಲಿ ಓರಿಗೆಯವರೊಂದಿಗೆ ಈಜಾಟಕ್ಕೆ ಹೋಗಿ ನೀರುಪಾಲಾದ ಸನ್ನಿವೇಷವನ್ನು ನೆನಸಿಕೊಂಡರೆ ಕರುಳು ಕಿತ್ತು ಬರುತ್ತದೆ.ಅತ್ಯಂತ ಬುದ್ಧಿವಂತ, ಚುರುಕಾದ ಮಧು ಸ್ವಭಾವತಃ ಸ್ನೇಹಶೀಲ,ಉದಾರ ಮನೋಭಾವನೆಯ ಸುರದೃಪಿ ಹುಡುಗನಾಗಿದ್ದ.ಅವನ ಸ್ಮರಣೆಗಾಗಿ ಗುಡ್ನಾಪುರದಲ್ಲಿನ ಪ್ರೌಢ ಶಾಲೆಗೆ  ಆತನ ಹೆಸರನ್ನು ಇಡಲಾಗಿದೆ.ಮಧು ಅಗಲಿದ ನಂತರ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಹೆಸರುವಾಸಿಯಾಗಿದ್ದ ಅವರ ಅಮ್ಮ ಮಂಗಳಾ ಅವರು ಸಾರ್ವಜನಿಕ ಜೀವನದಿಂದ ದೂರವಾದರು.ತಮ್ಮ ಉಳಿದ ಒಬ್ಬನೇ ಹಿರಿಮಗ ಮಹೇಶನ ಉತ್ಕರ್ಷೆಗೆ ಟೊಂಕಕಟ್ಟಿ ನಿಲ್ಲಬೇಕಾಯಿತು.ಮನೆತನದ ಹೊಣೆಗಾರಿಕೆ ಹಾಗೂ ಮಗನ ಭವಿಷ್ಯ ರೂಪಿಸುವುದಕ್ಕಾಗಿ ಮಂಗಳಮ್ಮನವರು ತಮ್ಮನ್ನು ಮುಡಿಪಾಗಿಸಿಕೊಂಡರು.ಅದಕ್ಕಾಗಿ ಅವರು ಕೆಲಕಾಲ ತಮ್ಮ ತವರು ಮನೆಯತ್ತ ಹೋಗಿ ಮಹೇಶನ ವಿದ್ಯಾಭ್ಯಾಸವೆಲ್ಲ ಮುಗಿದ ನಂತರ ವಿವಾಹ ನೆರವೇರಿಸಿ ಮಗನೊಂದಿಗೆ ವಾಸವಾಗಿದ್ದು ಬನವಾಸಿಗೆ ಬಂದು-ಹೋಗಿ ಮಾಡುತ್ತಿದ್ದರು.

ಇತ್ತ ಕೊಟ್ರೇಶಣ್ಣನವರು ಬನವಾಸಿಯಲ್ಲಿಯೇ ಉಳಿದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.ಮೊದಲಿನಿಂದಲೂ ನಾನು ಶ್ರೀಯುತರ ಕುಟುಂಬದೊಂದಿಗೆ ಸ್ನೇಹ-ಸಂಪರ್ಕಹೊಂದಿದ್ದೆ.ನನ್ನ ಬಗ್ಗೆ ಇಡೀ ಕುಟುಂಬಕ್ಕೆ ಒಲವಿತ್ತು.ನನಗಾದರೋ ಅವರ ಬಗ್ಗೆ ವಿಶೇಷ ಅಭಿಮಾನ ಮತ್ತು ಖಾಳಜಿ ಇದ್ದುದೇಕೋ ನನಗೆ ತಿಳಿಯದು.ಯಾವ ಜನ್ಮದ ಸಂಬಂಧವೋ ಅದು! ಮಧು ಮತ್ತು ಕಿರಿ ಗೆಳೆಯ ಮಹೇಶ ಇಬ್ಬರಿಗೂ ನಾನು ಹತ್ತಿರದವನಾಗಿದ್ದೆ.ಬಾಲ್ಯದಲ್ಲಿ ನಾ ಮಧುಗೆ ಸೈಕಲ್ ಕಲಿಸಿದ ನೆನಪೂ ಇನ್ನೂ ಮಾಸಿಲ್ಲ.

ಅಗಲಿರುವ ಕೊಟ್ರೇಶಣ್ಣನವರು ನನ್ನ ಜೀವನದಲ್ಲಿ ಎಂದಿಗೂ ನೆನಪಾಗಿ ಉಳಿಯುವ ವ್ಯಕ್ತಿಯಾಗಿದ್ದಾರೆ.ಹತ್ತಾರು ವಿಷಯ,ವಿಚಾರಗಳಲ್ಲಿ ಅವರು ನನಗೆ ಮಾರ್ಗದರ್ಶಿಯಾಗಿ ಸ್ಪೂರ್ಥಿ ತುಂಬಿದ್ದರೆಂದು ಹೆಮ್ಮೆಯಿಂದ ಹೇಳಿಕೊಳ್ಳ ಬಲ್ಲೆ.ನನ್ನಲ್ಲಿನ ಛಲ,ಧೈರ್ಯ,ಬುದ್ಧಿವಂತಿಕೆ,ಸಾಹಸ ಪ್ರವೃತ್ತಿ,ಹೋರಾಟದ ಮನೋಭಾವ,ವಿಧೇಯತೆ ಇತ್ಯಾದಿ ಗುಣಗಳನ್ನು ಗುರುತಿಸಿದ್ದ ಅವರು ನನ್ನ ಏಳ್ಗೆ ಬಯಸುತ್ತಿದ್ದರು.ನನ್ನ ವಿದ್ಯಾ ಶ್ರಮವನ್ನು ಕೊಂಡಾಡುತ್ತಿದ್ದರು.ನೀನು ಬನವಾಸಿಯಲ್ಲಿದ್ದು ಸಾಧಿಸುವುದೇನಿದೆ?ಅಭಿಶಂಕರ್ ಅವರಂತೆ ಏನಾದರೂ ಮಾಡುವ ಶಕ್ತಿ ನಿನ್ನಲ್ಲುಂಟು.ಹೀಗಾಗಿಯೇ ನಿನ್ನನ್ನು ಅವರು ಗುರುತಿಸಿ ಜತನದಿಂದ ಕಾಪಾಡುತ್ತಿರುವರು.ಊರಿಗೆ ಉಪಕಾರ ಮಾಡೋದು ಹೆಣಕ್ಕೆ ಶೃಂಗಾರ ಮಾಡಿದಂತೆ.ಇಲ್ಲಿದ್ದು ಪುಡಾರಿ(ರಾಜಕಾರಣಿ)ಯಾಗುವುದಕ್ಕಿಂತ ಸರ್ಕಾರದ ಉನ್ನತ ಹುದ್ದೆಗೆ ಸೇರಿ ಆಗ ಊರ ಸೇವೆ ಮಾಡುವುದರಲ್ಲಿ ನಿನ್ನ ಶ್ರೇಯಸ್ಸಿದೆ ಎನ್ನುತ್ತಿದ್ದರು.

ನಾನು ಮತ್ತು ನನ್ನ ಆತ್ಮೀಯ ಗೆಳೆಯ ಪ್ರಕಾಶ ಹೆಗಡೆ ಇಬ್ಬರೂ ಕೊಟ್ರೇಶಣ್ಣನವರ ಮನೆಗೆ ಪ್ರತಿ ದಿನ ಸಂಜೆ ತಪ್ಪದೇ ಭೇಟಿ ನೀಡುತ್ತಿದ್ದೆವು.ಹಿರಿಯರಾದ ಅವರು ಅಪಾರ ಜೀವನಾನುಭವ ಹೊಂದಿದ್ದರು.ನಾನು ಯಾವುದೇ ವಿಷಯದೊಂದಿಗೆ ಚರ್ಚೆ ಮಾಡಿ ಮಹತ್ತರವಾದುದನ್ನು ಹೆಕ್ಕಿ ತೆಗೆಯುವ ಸ್ವಭಾವದವನು.ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ-ಕೆದಕುತ್ತಿದ್ದೆ.ಅವರು ನೀಡುವ ಉತ್ತರ,ಜಾಣ್ಮೆಯ ಮಾತುಗಳು ನಮ್ಮನ್ನು ಆಕರ್ಷಿಸುತ್ತಿತ್ತು.ಅದು 1993-94ನೇ ಇಸ್ವಿಯಾಗಿರಬೇಕು,ಊರಲ್ಲಿ ಶ್ರೀಮಂತರು-ಬಡವರು,ಕೊಟ್ರೇಶಣ್ಣ ಎಲ್ಲರೂ ಸೇರಿ 4-5 ಕುಟುಂಬಗಳಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತೆಂಬುದು ತಿಳಿದಿತ್ತು.ಅಂಥ ಸಂದರ್ಭದಲ್ಲಿ ಸೋಮು,ಪ್ರಕಾಶ ನೀವೇಕೆ ನಿಮ್ಮ ನಿಮ್ಮ ಮನೆಗೆ ದೂರವಾಣಿ ಸಂಪರ್ಕ ಪಡೆದುಕೊಳ್ಳಬಾರದು?ನಿಮ್ಮ ಬುದ್ಧಿ ವಿಕಾಸಗೊಳ್ಳಲು,ಸಂಪರ್ಕ ಬೆಳೆಯಲು ಅದು ಅವಶ್ಯಕ.ದುಡ್ಡು ಬರುತ್ತೆ ಹೋಗುತ್ತೆ.ಬಿಲ್ಲನ್ನು ಕಟ್ಟುವ ಜಾಣ್ಮೆ ನಿಮಗಿದೆ.ಸೋಮು ಬಡತನವೆಂದು ಕೊರಗಬೇಡ.ಮೆಟ್ಟಿ ನಿಲ್ಲುವ ಶಕ್ತಿ ನಿನಗುಂಟು.ನಾಳೆಯೇ ಅರ್ಜಿ ಸಲ್ಲಿಸಿ ಮನೆಗೊಂದು ದೂರವಾಣಿ ಹಾಕಿಸಿಕೊಳ್ಳಿ ಎಂದರು.ನಾವು ಹಿಂದೆ-ಮುಂದೆ ನೋಡದೇ ಹಾಗೆಯೇ ಮಾಡಿದೆವು.ಇಂದಿಗೂ ಆ ದೂರವಾಣಿಯು ಕೊಟ್ರೇಶಣ್ಣನವರನ್ನು ನೆನಪು ಮಾಡುತ್ತದೆ.

ನನ್ನ ವಿದ್ಯಾಭ್ಯಾಸ ಎಲ್ಲಾ ಮುಗಿದು ಸರ್ಕಾರಿ ಸೇವೆಗೆ ಸೇರಿ ವಿವಾಹಯೋಗವೂ ಒದಗಿ ಬಂದು ಅವರಿಗೂ ಆಮಂತ್ರಣ ನೀಡಿದ್ದೆ.ಅವರು ಸೊರಬದ ಉಳವಿಯಲ್ಲಿ ನಡೆದ ವಿವಾಹಕ್ಕೆ ಬಂದಿರಲಿಲ್ಲ.2-3ದಿನ ಬಿಟ್ಟು ಮನೆಗೆ ಬಂದು ಹರಸಿದರು.ಆಗ ನಮ್ಮ ಸಣ್ಣ ಹಂಚಿನ ಮನೆಯನ್ನೆಲ್ಲಾ ಒಮ್ಮೆ ಕಣ್ಣಾಡಿಸಿ ಸೋಮು ಏನು ನೀನು,ಈ ಮನೆಯಲ್ಲಿ ಗಾಳಿ-ಬೆಳಕು ಸರಿಯಾಗಿ ಬರುತ್ತಿಲ್ಲ.ಗಾಳಿ ಬೆಳಕು ಇಲ್ಲದ ಮನೆ ಸಮಸ್ಯೆಗಳ ಆಗರವಾಗುವುದು.ತಡಮಾಡದೇ ಈ ಮನೆಯನ್ನು ಕೆಡವಿ ಯೋಗ್ಯತೆಯನುಸಾರ ಹೊಸ ಮನೆ ಕಟ್ಟು ಅಂದರು.ನಾನು ನೀವು ಹೇಳಿದ್ದು ಏನು ಮಾಡಿಲ್ಲ ಹೇಳಿ ಎಂದೆ.ಅಷ್ಟೇ ಮದುವೆಯಾಗಿ ಮೂರು ವರ್ಷಕ್ಕೇ ಗುಡಿಸಲನ್ನು ನೆಲಸಮ ಮಾಡಿ ಬ್ಯಾಂಕ್ ಸಾಲ ಪಡೆದು ಹಂತ ಹಂತವಾಗಿ ಕಟ್ಟುತ್ತಾ ಪುಟ್ಟದೊಂದು ಮನೆ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.ಗೃಹ ಪ್ರವೇಶ ಮಾಡಿ ವಾಸವಾಗಿರಬೇಕು ಅನ್ನುವಷ್ಟರಲ್ಲಿ ಮಗ ಮಹೇಶನಿಂದ ಇಂದು ಅವರ ಸಾವಿನ ಸುದ್ಧಿ ಕೇಳಿದೆ.ಈಗಲೂ ಮನೆಯನ್ನು ನೋಡಿದಾಕ್ಷಣ ಈ ಮನೆ ಕಟ್ಟಲು ಕೊಟ್ರೇಶಣ್ಣನವರೇ ಸ್ಪೂರ್ಥಿಯೆಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ.
ನಮಗೂ ಮತ್ತು ಎಲ್ಲ ಮಾನವರಲ್ಲೂ ಇರುವಂತೆ ಕೊಟ್ರೇಶಣ್ಣನವರಲ್ಲೂ ಹಲವು ದೌರ್ಭಲ್ಯಗಳಿದ್ದವು.ಆ ದೌರ್ಭಲ್ಯಗಳೇ ಅವರ ಕೊನೆಗಾಲದಲ್ಲಿ ಅವರನ್ನು ಚಿಂತೆಗೀಡುಮಾಡಿರುವುದಂತೂ ಸತ್ಯ.ಅಂತ ಕೆಲ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು.ಅದೇನೇ ಇದ್ದರೂ ನಾವು ಅವರನ್ನು ಮರೆಯಲು ಸಾಧ್ಯವಿಲ್ಲ.ನಾನು ಮತ್ತು ಗೆಳೆಯಾ ಪ್ರಕಾಶ ಭೇಟಿಯಾದಾಗಲೆಲ್ಲ ಅವರೊಡನೆ ಆಳವಾದ ಚಿಂತನ-ಮಂಥನ ನಡೆಸುತ್ತಿದ್ದೇವು.ನನ್ನ ಬಡತನವಾಗಲೀ ಅವರ ಸಿರಿತನ-ವ್ಯಥೆಯಾಗಲೀ ಯಾವುದೂ ನಮ್ಮ ಬಾಂದವ್ಯಕ್ಕೆ ಅಡ್ಡಿಯಾಗಿರಲಿಲ್ಲ.ಜೀವನದಲ್ಲಿ ಒಮ್ಮೆಯೂ ಅವರಿಂದ ನಾ ಯಾವುದೇ  ಸಂಪನ್ಮೂಲ ಸಹಾಯ ಪಡೆದಿಲ್ಲ.ಅವರ ಜ್ಙಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾ ವಂಚಿತನಾಗಿಲ್ಲ. ಜೋತಿಷ್ಯ,ತತ್ವಜ್ಙಾನ,ಧರ್ಮಶಾಸ್ತ್ರಗಳಲ್ಲಿ  ಅವರಿಗೆ ಜ್ಙಾನವಿತ್ತು. ಹುಟ್ಟು ಸಾವು,ಜೀವನ,ಮದುವೆ,ಹೆಂಡತಿ,ಮಕ್ಕಳು ಇತ್ಯಾದಿ ಮನೋವೈಜ್ಙಾನಿಕ ಅಂಶಗಳ ಮೇಲೆ ಅವರು ಬೆಳಕು ಚೆಲ್ಲುತ್ತಿದ್ದರು.ಸರ್ವಜ್ಙನ ತತ್ವ ನುಡಿಗಳು ಅವರ ಬಾಯಲ್ಲಿ ನಲಿದಾಡುತ್ತಿದ್ದವು.
ಸೇವೆಗೆ ಸೇರಿ ಬನವಾಸಿ ಬಿಟ್ಟ ನಂತರ ಅವರೊಡನಿದ್ದ ಸಂಪರ್ಕ ಕಡಿಮೆಯಾಗುತ್ತಾ ಹೋಯಿತು.ಊರಿಗೆ ಹೋದಾಗ ಒಮ್ಮೊಮ್ಮೆ ಭೇಟಿ ನೀಡಿ ಆರೊಗ್ಯ ವಿಚಾರಿಸುತ್ತಿದ್ದೆ.ಮಂಗಳೂರಿಗೆ ಬಂದ ನಂತರ ಬನವಾಸಿ ಬಹಳ ದೂರವೆನಿಸಿದೆ.ಅವರು ಇನ್ನಿಲ್ಲವೆಂಬ ವಾರ್ತೆ ತಿಳಿದ ನಂತರ ತೇವಗೊಂಡೆ.ನನ್ನ ಮತ್ತು ಅವರೊಡನಿದ್ದ  ಆ ಸಂಪರ್ಕದಲ್ಲಿನ ಒಡನಾಟದ ಅನುಭವದ ಮಾತುಗಳ ಮೂಲಕ ಆ ಹಿರಿಯ  ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.
  
= ಬನವಾಸಿ ಸೋಮಶೇಖರ್,ಮಂಗಳೂರು.
   28-12-2011

Monday 26 December 2011

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ.

"1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು,ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು.ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು.ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ.ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ.ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ.ನನ್ನ ಪಾಳಿ ಬಂದಾಗ ಅವರೊಡನೆ ನನ್ನ ತಾಪತ್ರಯ ಹೇಳಿಕೊಳ್ಳಬೇಕೆಂಬಷ್ಟರಲ್ಲಿ ದುಃಖ ಉಮ್ಮಳಿಸಿ ಬಿಕ್ಕಿ ಬಕ್ಕಿ ಅತ್ತು ಬಿಟ್ಟೆ.ಯಾರು ನೀನು? ಎಲ್ಲಿಂದ ಬಂದಿದ್ದಿ? ಏನು ನಿನ್ನ ವಿಷಯ? ಎಂದೆಲ್ಲ ಜೋರು ಧ್ವನಿಯಲ್ಲಿ ಪ್ರಶ್ನಿಸಿದಾಗ ನಾ ದಂಗಾಗಿ ಹೋಗಿದ್ದೆ! ನಾನು ಬನವಾಸಿಯಿಂದ ಮನೆ ಬಿಟ್ಟು ಬಂದ ವಿಷಯವನ್ನೂ ನನ್ನ ವೃತ್ತಾಂತವನ್ನೂ ತಿಳಿಸಿ ನನಗೊಂದು ಕೆಲಸ ಕೊಡಿಸಬೇಕೆಂಬ ಬೇಡಿಕೆ ಇಟ್ಟಿದ್ದೆ. ಓದುವುದು ಬಿಟ್ಟು ಇಲ್ಲಿಗೇಕೆ ಬಂದೇ? ಬೆಂಗಳೂರಲ್ಲೇನಿದೆ? ಇತ್ಯಾದಿಯಾಗಿ ಮೇಲಿಂದ ಮೇಲೆ ನನ್ನ ಪ್ರಶ್ನಿಸಿದ್ದರು.ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಕೂಡದು,ಸೀದಾ ಬನವಾಸಿಗೆ ಬಸ್ ಹತ್ತಬೇಕೆಂದು ತಾಕೀತು ಮಾಡಿದರು.ನನ್ನ ಬಗ್ಗೆ ಅತೀವ ಕಾಳಜಿ ವಹಿಸಿ ಪಕ್ಕದಲ್ಲಿಯೆ ಇದ್ದ ಆಪ್ತ ಕಾರ್ಯದರ್ಶಿ ವಿಜಯ ಪ್ರಕಾಶ (ಈಗವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಓ.)ಅವರಿಗೆ ಕಿವಿಯಲ್ಲಿ ಏನೇನೋ ಹೇಳಿದರು.ನನ್ನನ್ನು ಒಳಗೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿ ಚಹಾ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.ನಂತರ ವಿಜಯ ಪ್ರಕಾಶ್ ಅವರು ನನ್ನ ಕೈಗೆ ಆಗ ಎರಡು ಸಾವಿರ ಇತ್ತು ಯಾವುದೇ ಕಾರಣಕ್ಕೂ ಮತ್ತೆ ಬೆಂಗಳೂರಿಗೆ ಬರಬೇಡ,ಸಾಹೇಬರು ನಿನ್ನ ಬಗ್ಗೆ ತುಂಬಾ ಅನುಕಂಪಿತರಾಗಿರುವರು.ಅವರ ಮಾತನ್ನು ನಡೆಸಬೇಕೆಂದರೆ ನೀನು ಎಷ್ಟೇ ಕಷ್ಟ ಬಂದರೂ ಓದುವುದನ್ನು ಬಿಡಬೇಡ ಎಂದು ಹೇಳಿ ಬನವಾಸಿ ಬಸ್ ಅನ್ನು ಹತ್ತಿಸಿದ್ದರು.ನಂತರ ನನ್ನ ಬದುಕಿನ ದಿಕ್ಕೇ ಬದಲಾಯಿತು.ಮತ್ತೆಂದಿಗೂ ಅವರ ಬಳಿ ಸಹಾಯಕ್ಕಾಗಿ ನಾ ಹೋಗಲಿಲ್ಲ.ಅಂದು ಅವರು ಹಾಗೆ ನಡೆದು ಕೊಳ್ಳದೇ ಹೋಗಿದ್ದರೆ ನಾನು ಎಮ್.ಎ.,ಬಿ.ಇಡಿ ಸ್ನಾತಕೋತ್ತರನಾಗಲು ಸಾಧ್ಯವಿರಲಿಲ್ಲ.ನನ್ನ ವ್ಯಕ್ತಿತ್ವ ಅರಳುತ್ತಿರಲಿಲ್ಲ.ನಾನ್ಯಾವುದೋ ಬಾರಲ್ಲೋ ಹೋಟೇಲಿನಲ್ಲೋ ಒಂದು ಚಾಕರಿ ಮಾಡಿಕೊಂಡಿರಬಹುದಿತ್ತು ಅಷ್ಟೇ.ಅವರ ಖಾಳಜೀ ತುಂಬಿದ ಹಾರೈಕೆ ನನ್ನನ್ನು ಓದಿಗೆ ಪ್ರೇರೇಪಿಸಿತು,ಸ್ಪೂರ್ಥಿ ತುಂಬಿತು.ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ.ಬಂಗಾರಪ್ಪಾಜೀ ನಾ ನಿಮ್ಮನ್ನು ಮರೆಯಲುಂಟೇ?ನನ್ನೀ ನುಡಿ ನಮನದ ಮೂಲಕ ತಮ್ಮ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ."
= ಬನವಾಸಿ ಸೋಮಶೇಖರ್,ಮಂಗಳೂರು.

Tuesday 20 December 2011

‎'ಕದಂಬ ವೈಭವ"

ವೈಜಯಂತಿ ಪುರದರಸ ಮಯೂರ ವರ್ಮನೆ
ಸಿರಿಗನ್ನಡಾಧಿಪತ್ಯ ಕಟ್ಟಿದ ಓ ದೊರೆಯೇ....
ಪಲ್ಲವರ ಸದೆಬಡಿದ ಕದಂಬ ಕುಲತಿಲಕ

ನೀ ಕರುನಾಡ ವೈಭವದ ವರಧಾತ!

ಛಪ್ಪನ್ನೈವತ್ತಾರು ದೇಶಗಳಲ್ಲೂ
ಹಬ್ಬಿತ್ತು ನಿನ್ನಯ ಕೀರ್ತಿ ಪತಾಕೆ
ಕರ್ನುಡಿಯ ತೊಟ್ಟಿಲ ತೂಗಿದ ಕಂದ ನೀ
ಜೋಗುಳದ ಹರಕೆಯನು ಮೆರೆಸಿದ ರಾಯನು.!!

ಹೂತು ಹೋಗಿದ್ದ ಕದಂಬ ವೈಭವದ
ಇತಿಹಾಸ ಕೆದಕಿದರು ಅಭಿಶಂಕರರು
ಹತ್ತೋಲೆ ಬರೆದರು ಹಗಲಿರುಳು ದುಡಿದರು
'ಲೋಕ ಧ್ವನಿ'ಯಾಗಿ ನಾಡನ್ನು ಬೆಳಗಿದರು.!!!

ವರದಾ ತೀರದಲಿ ನೆಲೆಸಿರುವ ಈಶ
ಪಾರ್ವತಿಯ ಪ್ರಾಣ ನೀ ಮಧುಕೇಶ
ಸಂಪನ್ನಗೊಂಡಿತು ಅಷ್ಟಬಂಧದಲಿ
ಮಧುಕೇಶ್ವರ ನಿನ ಮಹಿಮೆ ಬಲು ಹಿರಿಮೆ!!!

ಅಲ್ಲಮ್ಮ ಪ್ರಭುಗಳು ಮೆಟ್ಟಿದ ನಾಡು
ಹರ್ಡೇಕರ ಮಂಜಪ್ಪನವರು ಹುಟ್ಟಿದ ಊರು
ಚಾಮರಸರು ಪ್ರಭುಲೀಲೆ ಬರೆದರು
ಪಂಪಕಾವ್ಯ ಹಾಡಿತು-ಪಾಡಿತು!!!

ಕನ್ನಡ ಸಂಸ್ಕೃತಿಯ ತೊಟ್ಟಿಲು ಬನವಾಸಿ
ಪ್ರಾಚೀನ ಪ್ರಖ್ಯಾತಿ ಹೊಂದಿಹುದು ವೈಜಯಂತಿ
ಮಧು ಮಹೋತ್ಸವವು ಕದಂಬೋತ್ಸವವಾಗಿ
ಸಾಗುತಿಹುದು ನುಡಿತೇರು ಈ ಪರಿಯಾಗಿ!!!

ದತ್ತರಾಜ ಯೋಗೀಂದ್ರರು ತಪವ ಗೈದಿಹರು
ಸಿದ್ಧಲಿಂಗ ಸ್ವಾಮಿಗಳು ಶತಾಯುಷಿಗಳಾದರು
ಹಕ್ಕಲು ಮಾರಿಕಾಂಬೆ ನಾಡಲ್ಲಿ ನೆಲೆಸಿಹಳು
ಬನವಾಸಿ ಭಾಗ್ಯದಾ ಬನಸಿರಿಯೇ!!!!

   = ಬನವಾಸಿ ಸೋಮಶೇಖರ್.

Sunday 11 December 2011

ಸಾಹಿತ್ಯ ಸಮ್ಮೇಳನ ಸಂಘಟಕರು,ಪರಿಷತ್ತು ಹೊಣೆಗಾರರು ಅಚಾತುರ್ಯದಿಂದ ಮುಕ್ತವಾಗಿರಲಿ.

"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ ಇರುವಂತದ್ದೇ ಈ ಪ್ರಲಾಪ.ಆದಾಗ್ಯೂ ನಮ್ಮ ಸಾಹಿತ್ಯ ಸಮ್ಮೇಳನ ಸಂಘಟಕರಲ್ಲಿ ಇಂಥ ಲೋಪವಾಗಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುವುದು.ರಾಜಕೀಯ ಯಾವ ಕ್ಷೇತ್ರವನ್ನೂ ಬಿಡದೇ ನುಂಗಿ ಹಾಕಿರುವುದು ವಿಪರ್ಯಾಸ.ನೋಡಿ ಈ ದಿನ ಕೇಂದ್ರ ಸಚಿವರಾದ ಶ್ರೀ ವೀರಪ್ಪ ಮೊಯಿಲಿ ಅವರ ಮಾತನ್ನು ಪ್ರಜಾವಾಣಿಯಲ್ಲಿ ಅವಲೋಕಿಸಿದೆ.ಅದನ್ನು ನೀವೇ ಓದಿ"ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನಗೆ ಆಹ್ವಾನ ನೀಡಿಲ್ಲ.ಖುದ್ದಾಗಿ ಆಹ್ವಾನಿಸುವುದು ಬೇಡ,ಆಹ್ವಾನ ಪತ್ರಿಕೆ ಬಂದಿದ್ದರೂ ಹೋಗದೇ ಉಳಿಯುತ್ತಿರಲಿಲ್ಲ"ಇದಕ್ಕೇನೆನ್ನಬೇಕು ನೀವೇ ಹೇಳಿ!ಆಮಂತ್ರಣ ಕಳಿಸುವ ವ್ಯವಧಾನವೂ ಇಲ್ಲದ ಸಮ್ಮೇಳನ ಸಂಘಟಕರು,ಸಾಹಿತ್ಯ ಪರಿಷತ್ತಿನ ರುವಾರಿಗಳು ಅದೇನು ಮಾಡುತ್ತಿದ್ದರು?ಇಂಥ ಅದೆಷ್ಟು ಮಹನೀಯರಿಗೆ ಆಮಂತ್ರಣ ಕಳಿಸಿಲ್ಲವೋ ಗೊತ್ತಿಲ್ಲ.ಸರ್ಕಾರದ ದುಡ್ಡಿನಿಂದ ನಡೆವ ಜಾತ್ರೆಗೇ ಈ ಗತಿಯಾದರೆ? ಛೇ! ನಿಜಕ್ಕೂ ಬೇಸರ ಬರುತ್ತದೆ.ಕನ್ನಡ ಸರಸ್ವತಿಯ ಮಕ್ಕಳು ರಾಜ್ಯ,ಅಂತರಾಜ್ಯ,ದೇಶ ವಿದೇಶಗಳೆಲೆಲ್ಲ ಹಬ್ಬಿಕೊಂಡಿದ್ದಾರೆ.ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿದ್ದಾರೆ.ಸಮ್ಮೇಳನ ಇಡೀ ನಾಡ ಮಕ್ಕಳದು.ಯಾರದೋ ಸ್ವಂತದ್ದಲ್ಲ.ಕೊನೇ ಪಕ್ಷ ಆಮಂತ್ರಣ ಪತ್ರ ಹೋದರೂ ಸಾಕು ವಾಗ್ದೇವಿಯ ಮಕ್ಕಳು ಪುಳಕಿತರಾಗುವರು.ಅಂತ ಇಚ್ಛಾಶಕ್ತಿ,ನಿಷ್ಪಕ್ಷಪಾತ ಮನೋಭಾವ,ಸಹೃದಯಿ ಚಿಂತನೆ ಅಗತ್ಯ ಅಷ್ಟೇ.ಮುಂದಿನ ದಿನಗಳಲ್ಲಿ ಇಂಥ ಅಚಾತುರ್ಯಗಳಾಗದಿರಲಿ ಎಂಬುದೇ ಆಶಯ."
= ಬನವಾಸಿ ಸೋಮಶೇಖರ್.

Wednesday 7 December 2011

"ಉರಿವ ನಾಲಿಗೆಯಾಗಬೇಡ" ವೆನ್ನುವ ಮೂರ್ನಾಡರ ಗಾಳಿಗೆ ಪ್ರಾರ್ಥನೆ ಎಂಬ ಕವಿತೆ.

"ಅದ್ಭುತವಾದ ಗಾಳಿಯ ಅಮೂರ್ತ ಪ್ರತಿಮೆಯನ್ನೇ ಒಂದು ಸುಂದರ ಕವನಕ್ಕೆ ವಿಷಯವಸ್ತುವಾಗಿ ಸಮರ್ಥವಾಗಿ ಬಳಸಿಕೊಂಡಿರುವ ಕವಿ ಮನಸ್ಸು ಘಾಸಿಗೊಂಡಂತೆ ಭಾಸವಾಗಿದೆ.ಅಂತಃಕರಣದಲ್ಲಿ ಅವ್ಯಕ್ತವಾಗಿ ಹೃದಯದಾಳಕ್ಕೆ ಲಗ್ಗೆ ಇಟ್ಟ ನೋವಿನ ಯಾತನೆ,ಆ ಮೂಲಕ ತನ್ನನ್ನೇ ಸಂತೈಸಿಕೊಳ್ಳುವ ರೀತಿಯಲ್ಲಿ ಉರಿವ ನಾಲಿಗೆಯಾಗಬೇಡವೆನ್ನುವ ಪರಿ ಹೃದಯ ಕಲುಕುತ್ತದೆ.ಕಪ್ಪಿಟ್ಟ ಮೋಡದ ಎದೆ ಸವರಿ ಚುಂಬಿಸು ಸುರಿಯಲಿ ಒಂದು ಹನಿ ಇಳೆಗೆ ಎನ್ನುವ ಕವಿಯ ಕೋರಿಕೆ ಭಾವವಂತೂ ಅತೀ ಮಧುರವಾಗಿದೆ.ಉರಿಯುತ್ತಿರುವ ಮನೋಜ್ವಾಲೆಗೆ ತಂಪೆರೆಯುವ ತಂಗಾಳಿಯಾಗಿ ಹೃದಯ ಸ್ಪರ್ಷಿಸಿ ವೇದನೆ ಅಳಿಯಲಿ ಎಂಬ ಮನದಿಂಗಿತ ಕವಿಯದಾಗಿದೆ.ದ್ವೇಷ,ಅಸೂಯೇ ಯಾವುದೂ ಮನಸ್ಸನ್ನು ಹಗುರಾಗಿಸದು,ಅಹಂಕಾರ,ಸೊಕ್ಕಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ ಆದ್ದರಿಂದ ಎಲೆ ಗಾಳಿಯೇ ಇವೆಲ್ಲವನ್ನೂ ಇನ್ನಿಲ್ಲವಾಗುವಂತೆ ಮನವಪ್ಪಳಿಸಿ ಸ್ನೇಹ ಮಾಧುರ್ಯದ ಸವಿ ನೆನಪು ಸದಾ ಇರುವಂತೆ ಚುಂಬಿಸು,ಆಲಂಗಿಸು ಬಂಧುತ್ವದ ನಿರಂತರ ಸಾಂಗತ್ಯ ಉಳಿಯುವ ಹಾಗೆ ಮನವ ಸ್ಪರ್ಷಿಸು ಎನ್ನುವ ಕವಿ ಮನಸು ಕೋಮಲವಾಗಿದೆ.ಯಾರ ವೈರತ್ವವೂ ಬೇಡ,ಸ್ನೇಹವೇ ಸದಾ ಬೆಳಗಲಿ ಎಂಬ ಆಶಯ ಕವಿಯದಾಗಿದೆ.ಸುಂದರ ಮತ್ತು ಅರ್ಥಪೂರ್ಣ ಕವನ.ತುಂಬಾ ಇಷ್ಟವಾಯಿತು."


ಕವನ ಹೀಗಿದೆ
========
 
ಗಾಳಿಯೇ ಬೇಡ
ಬಿರುಗಾಳಿಯಾಗಬೇಡ  !
ಉಸಿರಾಡೋ ಎದೆಗೆ ನುಗ್ಗಿ
ಭುಸುಗುಟ್ಟಬೇಡ  !
ಬೇಗುದಿ ಬೆಂಕಿಗೆ
ಜೊತೆ ಸೇರಬೇಡ !

ಕಪ್ಪಿಟ್ಟ ಮೋಡದ
ಎದೆ ಸವರಿ ಚುಂಬಿಸು
ಸುರಿಯಲಿ ಒಂದು ಹನಿ ಇಳೆಗೆ !
ಆಗಸದ ಮೊಗಕೆ
ತಿಳಿ ಬಂದು ಅರಳಲಿ
ಸದಾ ಬೀಸು ನಿನ್ನ ತಂಪು !

ಶಾಂತಿಯ ಹೆಜ್ಜೆಗಳು
ಬೀದಿಗೆ ನಡೆಯಲಿ
ತೆರೆಯಲಿ ನಿನ್ನ ಸ್ನೇಹದ ಭಾಹು !
ಬೀದಿಯ ದೀಪಗಳು
ದಾರಿಯ ತೆರೆಯಲಿ
ಕಾಪಿಡಲಿ ನಿನ್ನದೇ ಉಸಿರು !

ಲೋಕದ ಮಾತಿಗೆ
ಭುಗಿಲೆದ್ದ ಜ್ವಾಲೆಗೆ
ಮೋಡಗಳ ಗುಡುಗಿಸಿ ಕರೆಯೇ !
ನಗುವಾಗಿ ಮಿಂಚಿಗೆ
ಮಳೆಯಾಗಿ ಜೊತೆಗೆ
ಉರಿ ಬೆಂಕಿ ಎದೆಗಳ ತಣಿಸೆ !

ಅಹಂ ಗೋಡೆಗಳ
ಮೇಲೊಂದು ದೀಪ
ಆರದಿರಲಿ ನಿನ್ನ ಬಿರುಸು ನುಡಿಗೆ !
ಬಿರುಕಿಟ್ಟ ಗೋಡೆಗಳ
ಬಿರುಕೊಳಗೆ ನುಗ್ಗಿ ಬಾ
ಬೆಸೆಯಲಿ ಬಂಧಗಳು ಜಗಕೆ !

ಗಾಳಿಯೇ ಬೇಡ
ಬೇಡವೇ ಬೇಡ
ಕಿಚ್ಚುಗಳ ಘರ್ಷಿಸಬೇಡ
ನೋವುಗಳ ತುಂಬಿಸಿ
ದ್ವೇಷಗಳ ಎಬ್ಬಿಸಿ
ಬೆಂಕಿಗೆ ನಾಲಗೆಯಾಗಬೇಡ..!
-ರವಿ ಮೂರ್ನಾಡು

Tuesday 6 December 2011

ರಾಜನೀತಿ ಕುರಿತು.

" ಯಾವುದೇ ಪಕ್ಷಮೋಹವಿಲ್ಲ.ಪ್ರಜಾಪ್ರಭುತ್ವ,ಸಮಾನತೆ,ಜಾತ್ಯಾತೀತ ತತ್ವಗಳಲ್ಲಿ ನಂಬಿಕೆ.ಪ್ರತಿಯೊಬ್ಬ ದೇಶವಾಸಿಗೂ ರಾಜಕೀಯ ಬದ್ಧತೆ,ಇಚ್ಛಾಶಕ್ತಿ ಇರಲೇಬೇಕು.ಪ್ರಜಾಪ್ರಭುತ್ವಕ್ಕೆ ನಾಗರೀಕನೇ ಬೇರು,ಉಸಿರು,ಜೀವಾಳ.ಸಾರ್ವಭೌಮ ಪರಮಾಧಿಕಾರ ಹೊಂದಿರುವ ಪ್ರತಿಯೊಬ್ಬ ಪೌರನೂ ರಾಜನೀತಿಯ ವಾರಸುದಾರ.ಜವಾಬ್ದಾರಿಯಿಂದ ನುಣುಚಿಕೊಂಡರೆ ನಮ್ಮನ್ನು ನಾವೇ ಅಧಃಪತನಕ್ಕೆ ಈಡುಮಾಡಿಕೊಂಡಂತೆ.ಮೌಲ್ಯಾಧಾರಿತ,ತತ್ವಾಧಾರಿತ,ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಯಾವುದೇ ಸಂಸ್ಥೆ,ವ್ಯಕ್ತಿಗಳನ್ನು ಬೆಂಬಲಿಸುವುದು,ಪರಮಾಧಿಕಾರ ಚಲಾಯಿಸುವುದು ನಾಗರೀಕ ಹಕ್ಕು ಮತ್ತು ಕರ್ತವ್ಯವೆಂಬುದು ನನ್ನ ಭಾವನೆ.ಆದ್ದರಿಂದ ರಾಜಕೀಯ ನಮಗೇಕೆ ಎಂದು ಮೂಗುಮುರಿದು, ದೂರಸರಿದು ಪ್ರಜಾಪ್ರಭುತ್ವ ಯಾರದೋ ಪಟ್ಟಭದ್ರರ ಪಾಲಾಗಲು ಬಿಡಬೇಡಿ.ನಾಗರೀಕ ಹಕ್ಕು ಮತ್ತು ಕರ್ತವ್ಯಪಾಲನೇ ನಮ್ಮ ಉಸಿರಾಗಿರಲಿ."

Saturday 3 December 2011

ಮಡೆ ಸ್ನಾನ

"ಮಂಡೆ ಬಿಸಿ ಬಿಸಿಯಾಗುವ ವಾತಾವರಣವೇ ನಿತ್ಯ ಸೃಸ್ಟಿಯಾಗುತ್ತಿರುವಾಗ ಯಾರಿಗೇಕೆ ಎಂದು ಪ್ರಶ್ನಿಸುವ ಮೂಲಭೂತವಾದದ ಮಾತೇ ಮನಸಿಗೆ ಘಾಸಿ ಮೂಡಿಸುತ್ತಿದೆ.ನಿತ್ಯ ಜೀವನದಲ್ಲಿನ ಹತ್ತಾರು ವೇಷಗಳು,ನೂರಾರು ಸಂಪ್ರದಾಯ,ನಂಬಿಕೆ ಎಂದೆಲ್ಲಾ ಬಿಂಬಿಸಿ ಸಮಾಜವನ್ನು ಅಜ್ಙಾನ,ಅಂಧಕಾರ,ಮೌಡ್ಯತೆಯತ್ತ ಮತ್ತಷ್ಟು ಕೊಂಡೊಯ್ಯುವಂತೆ ಆ ಮೂಲಕ ಪಟ್ಟ ಭದ್ರರ ಸಿದ್ಧಾಂತ,ತತ್ವಗಳ ಬೇರುಗಳು ಗಟ್ಟಿಯಾಗುವಂತೆ ಮಾಡುತ್ತಿರುವ ವ್ಯವಸ್ಥಿತ ಹುನ್ನಾರುಗಳನ್ನು ನೋಡಿಯೂ ನೋಡದವರಂತೆ ಕಣ್ಮುಚ್ಚಿಕುಳಿತು ಕೊಳ್ಳಬೇಕೆ?ಇನ್ನೂ ಬಹಳ ಕಾಲ ಇದೇ ವ್ಯವಸ್ಥೆ ಇರುವುದೆಂಬ ಭರವಸೆ ಬೇಡ.ವೈಚಾರಿಕ ತಿಳುವಳಿಕೆ,ಸಂಶೋಧನಾ ಮನೋಭಾವ,ವೈಜ್ಞಾನಿಕತೆಗಳೆಲ್ಲದರ ಪರಿಣಾಮ ಕಟ್ಟಕಡೆಯ ಮನುಷ್ಯನೂ ಜಾಗೃತನಾಗುವಂತೆ ಆಗಿದೆ.ಕಾಲವೂ ಬದಲಾಗುತ್ತಿದೆ.ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳಬೇಕಿದ್ದ ವ್ಯವಸ್ಥೆಯ ಅಟ್ಟಹಾಸಕ್ಕೆ ಕೊನೆಮೊಳೆ ಹೊಡೆಯುವ ಕಾಲ ಬಂದಿದೆ"
('ಕೆಲವರಿಗೇಕೆ ಮಡೆ ಸ್ನಾನದ ಮಂಡೆ ಬಿಸಿ' ಎಂದು ಪ್ರಶ್ನಿಸಿ ಬರಹಗಾರರೋರ್ವರು ಕನ್ನಡ ಬ್ಲಾಗಿನಲ್ಲಿ ಬಿತ್ತರಿಸಿದ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು.)

Tuesday 22 November 2011

"ಏನಿದು ಅಣ್ಣಾ ಹೇಳಿಕೆ?

"ಏನಿದು ಅಣ್ಣಾ ಹೇಳಿಕೆ? ಮದ್ಯಪಾನಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿ ಥಳಿಸಬೇಕಂತೆ? ಇವರೇನು ಮಾಡಹೊರಟಿದ್ದಾರೆ?ಇವರ ಅಂತರಾಳದಲ್ಲಿ ಹುದುಗಿಕೊಂಡಿರುವ ಪಟ್ಟಭದ್ರ ಆಶೋತ್ತರವಾದರೂ ಏನು?ನಾವು ಇವರ ಬಗ್ಗೆ ಹೆಮ್ಮೆ ಪಟ್ಟಿದ್ದೆವು.ಆದರೆ ಈಗಿವರು ಮೂಲಭೂತವಾದಿಯಂತೆ ಭಯಂಕರವಾಗಿ ವರ್ತಿಸುತ್ತಿದ್ದಾರೆ.ಮದ್ಯಪಾನ ನಿಷೇಧ ಹೋರಾಟದಂತಹ ವಿದಾಯಕ ಚಳುವಳಿ ಮಾಡುವದನ್ನು ಬಿಟ್ಟು ಹೊಡೆಯಲು ಪ್ರಚೋದಿಸುತ್ತಾರೆ.ಇಂಥ ಹೋರಾಟಗಾರ ನಮಗೆ ಬೇಕೇ? ಗಾಂಧಿ ತತ್ವ ಎಲ್ಲಿ? ಅಣ್ಣಾ ನೀತಿ ಎಲ್ಲಿ? ಛೇ!"

Monday 21 November 2011

" MY ACTIVITIES"

Born and brought up in a poor family at Banavasi, came up in life with own efforts and in the forefront of various movement since student days. Participated actively in activities related to art, literature, science, culture, social service and sports. Was the editor of hand written magazine at school level and also in the magazines devoted to music in the music department of the college. (1994-95)

Brought up under the tutelage of Sri K.Abhishankar,a freedom fighter and the chief editor of the gazetteer published by the Karnataka Government since 1992.Did B.A and B.Ed  digree under his able guidance. The interaction and close association with Sri Abhishankar (1992-1998) helped to realize human values. The thought process was oriented towards attaining ideals of life.

Worked as a reporter to local daily at Sirsi “Lokha Dhwani” in the student days and also served as a District reporter to monthly Magazines like“Baduku, Daari, Mane”. Later joined to  “Kannada Prabha”, a reputed Kannada daily of Karnataka as a News Contributor at the same time elected the president of Student Federation (SFI) in the college, led many student movement during the period.                                                                        

Served As a President of “Sneha Kala Kunja”,a cultural organization of Sirsi from 1994 to 1996.Arranged many concerts of reputed musicians at Sirsi.Started BRA Youth Association at Banavasi in 1994.As a founder President  of this Association(1994-96),worked sincerely to get all government facilities to the economically backward and deprived classes of the society.

Worked as History teacher in Buddha English Residential School at Bidadi in Bangalore. After the death of Abhishankar the mentor, left Bangalore and joined as language teacher in S.S.G.High School at Narur Village in 1998.Strived for all-round development of the school.

Worked as the member of Land Tribunal of Sirsi Taluk from 2000 to 2002.As a member of land tribunal, tried hard for speedy judgement of cases infavour of exploited Dalits and deprived farmers.

Conferred with “Shikshan Shri” Award by Chitradurga Muruga Rajendra Math at the hands of Shri Shivamurthy Muruga Rajendra Sharana,the pontiff. Received “Best Teacher Award” at District level(1999-2000)

Membership of Rotary Gram Dal at Banavasi sponsored by Sirsi Rotary club in 1999.Served as its Secretary and treasurer made organized effort for rural development through Rotary wing.

Joined Karnataka Tourism Department as Tourism Promoter on 03-12-2002.

Represented the department of tourism, Govt.of Karnataka in India International  Trade fair at New Delhi in the year 2010 and also represented in 5th Vibranth  Gujarat Global Summit- 2011 at Ahmadabad. Gained lot of knowledge about Tourism.

Since joining in the department, shown lot of interest in Departmental work and dedicated himself for the growth of Tourism in the State.

Friday 18 November 2011

ಕವಿ ಅಬ್ದುಲ್ ಸತ್ತಾರ್ ಕೊಡಗು ಅವರ " ಬರೀ ಮಣ್ಣು ಗುಡ್ಡೆ" ಕವನದ ಬಗ್ಗೆ.

"ಇಡೀ ಕವನ ಚಿಂತನೆಗೆ ಗ್ರಾಸವೊದಗಿಸಿ ಜಾಗೃತಿಯ ಸಂದೇಶವನ್ನು ಮೈದೋರಿ ನಿಂತಿದೆ.ಒಂದು ಅವಿಸ್ಮರಣೀಯ ಹೆಮ್ಮೆಯ ಜಾಗೃತ ಸ್ಥಳವನ್ನು ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕೋಮು ಧ್ವೇಷದ ಬೀಜ ಬಿತ್ತಿದ ಖಾದಿಧಾರಿಯ ಕರಾಮತ್ತಿಗೆ,ಮಸಲತ್ತಿಗೆ ಮರುಳಾದ ಅಮಾಯಕ ಜನರ ಅಸಹಾಯಕತೆಯ ಅನಾವರಣ ಮಾಡಿರುವ ಈ ಕವಿತೆ ಸಾರ್ವಕಾಲಿಕವಾಗಿದೆ.ಕವಿಯ ಅಂತರಾಳದಲ್ಲಿ ಹುದುಗಿದ್ದ ಅವ್ಯಕ್ತವಾದ ನೋವೊಂದು ಕವನದ ರೂಪತಾಳಿ ಮನಸಿನ ದುಗುಡವನ್ನು ಹಗುರವಾಗಿಸಿಕೊಳ್ಳುವ ಪ್ರಯತ್ನವೂ ಕವನದಲ್ಲಿ ಅಚ್ಚೊತ್ತಿದೆ.ಜನಮರುಳೋ ಜಾತ್ರೆಮರುಳೋ ತುಂಬಿತ್ತು ತಲೆ ತುಂಬಾ ರದ್ದಿ ಬಿಡಲಿಲ್ಲ ಚಾಳಿ ಮೂಢಮಂದಿ.ಎನ್ನುವ ನುಡಿಯು ಇಂದಿನ ಮೂಢ ಮಂದಿಯ ಅವಿವೇಕಕ್ಕೆ ಚಾಟೀ ಏಟು ನೀಡಿದೆ.ಹಿಂದೇ ಮುಂದೆ ನೋಡದೇ ಹತ್ತರ ಕೂಡ ಹನ್ನೊಂದರಂತೆ ತಮ್ಮ ಸಾರ್ವಭೌಮ ಪರಮಾಧಿಕಾರವನ್ನು ವ್ಯರ್ಥವಾಗಿ ಚಲಾಯಿಸಿ ಕೊನೆಗೆ ಪಶ್ಚಾತ್ತಾಪ ಪಡುವ ಆದರೂ ವಿಚಾರ ಹೀನರಾಗಿ ಕುರಿಮಂದೆಗಳಂತೆ ಜೀವನ ಸಾಗಿಸುವ ಕಟು ವಾಸ್ತವ ಸತ್ಯವನ್ನು ಕವನವು ಕಕ್ಕಿ ತನ್ನ ಆಕ್ರೋಷವನ್ನು ಹೊರಹಾಕಿದೆ.ಜನರ ನಂಬಿಕೆಯ ಶ್ರದ್ಧಾ ಭಕ್ತಿಯ ಕೇಂದ್ರವು ಹೇಗೆ ಪಟ್ಟಬದ್ಧ ಹಿತಾಸಕ್ತರ ಆಶೋತ್ತರವನ್ನು ಈಡೇರಿಸುವ ಶಕ್ತಿ ಸ್ಥಳವಾಗಿ ಮಾರ್ಪಾಡು ಹೊಂದುತ್ತದೆ ಎಂಬುದನ್ನೂ ಕವಿ ಇಲ್ಲಿ ಅರ್ಥಪೂರ್ಣವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಬಿಂಬಿಸಿರುವರು.ಜೊತೆಗೆ ಇಡೀ ಕವನದ ಆಶಯ ನೂರು ದಿಕ್ಕನ್ನು ಪಡೆದು ವಿಚಾರದ ಓಘಕ್ಕೆ ಮುನ್ನುಡಿ ಬರೆದಿದೆ.ನನಗೆ ತುಂಬಾ ಇಷ್ಟವಾದ ಕವನವಿದು."'
"=http://banavasimaatu.blogspot.com/
ಕವನ ಹೀಗಿದೆ ನೋಡಿ.


ಅದೊಂದು ಮಣ್ಣು ಗುಡ್ಡೆ
ಮಾಡದ ತಪ್ಪಿಗೆ ಹೊಣೆಯಾಗಿ
ಮಣ್ಣು ಹೊದ್ದು ಮಲಗಿದ್ದ
ಒಳಗೊಬ್ಬ ನಿರ್ಜೀವ ಸಂತ.

... ಹಸಿರು ಕಾವಿಧಾರಿ
ಒಂದಾಗಿ ಸೇರಿ
ಆಗಿತ್ತು ಭಾವೈಕ್ಯದಾ ಬಿಂದು

ಅವಳ ಕೊರಳಿಗೊಂದು ದಾರ
ಇವನ ಕೈಗೊಂದು ಉರುಕು
ಕೂತರೂ ಪವಾಡ ನಿಂತರೂ ಪವಾಡ

ಅಲ್ಲೊಬ್ಬ ಜನನಾಯಕ
ಅದು ತಮ್ಮದೆಂದ, ನಿಮ್ಮದಲ್ಲವೆಂದ
ಬಿತ್ತಿದ್ದ ಕೋಮು ಬೀಜ

ಬಡಿದಾಡಿ ಸೋತರು, ಸತ್ತರು ಕೆಲವರು
ಅವನು ಇಷ್ಟು ನಕ್ಕಿದ್ದ
ಬೆಂದಿತ್ತು ಬಿತ್ತಿದಾ ಬೀಜ

ಜನಮರುಳೋ ಜಾತ್ರೆಮರುಳೋ
ತುಂಬಿತ್ತು ತಲೆ ತುಂಬಾ ರದ್ದಿ
ಬಿಡಲಿಲ್ಲ ಚಾಳಿ ಮೂಢಮಂದಿ.

ಅದೊಂದು ಮಣ್ಣು ಗುಡ್ಡೆ
ಮಾಡದ ತಪ್ಪಿಗೆ ಹೊಣೆಯಾಗಿ
ಮಣ್ಣು ಹೊದ್ದು ಮಲಗಿದ್ದ
ಒಳಗೊಬ್ಬ ನಿರ್ಜೀವ ಸಂತ.
=abdulsatthar.wordpress.com/
 

Wednesday 16 November 2011

ಕವಿ ರವಿ ಮೂರ್ನಾಡು ಅವರ ಮುತ್ತಿನಂಥಾ ಮಾತು.


"ವಿಚಾರಕ್ಕೊಂದರಂತೆ , ನಿಲುವಿಗೊಂದರ೦ತೆ, ಕಾನೂನಿಗೊ೦ದರಂತೆ,ಜಾತಿ- ಮತ- ಪಂಥಕ್ಕೊ೦ದರಂತೆ ಮನಸ್ಸನ್ನು ಬದಲಿಸುವ ನಾವು ಭಾರತಿಯರು.ಗುಂಪು ಕಟ್ಟುವುದರಲ್ಲಿ ನಿಸ್ಸೀಮರು.ಎಲ್ಲಾಕ್ಕಿಂತ ಹೆಚ್ಚಾಗಿ ದಿಕ್ಕಿಲ್ಲದ ಭಿಕ್ಷುಕರು ಇಂದು ಗುಂಪು ಕಟ್ಟಿಕೊಂಡು ಅನ್ನಕ್ಕಾಗಿ ಕಿತ್ತಾಡಿಕೊಂಡಿರುವಾಗ ಗುಂಪು ಕಟ್ಟಿಕೊಳ್ಳುವುದು ಒಳ್ಳೆಯದು ಅನ್ನಿಸಿತು.ಎಲ್ಲದಿಕ್ಕಿ೦ತ ಹೆಚ್ಚಾಗಿ ಗಂಡಸರ ಕಲ್ಯಾಣ ಸಂಘ ,ಮಹಿಳೆಯರ ಸ್ವಸಹಾಯ ಸಂಘ.ಎಲ್ಲಿ ಮನುಷ್ಯನಿಂದ ನ್ಯಾಯ ಸಿಗಲಿಲ್ಲವೋ ಆವಾಗ ಮನುಷ್ಯರೇ ಗುಂಪು ಕಟ್ಟಿಕೊಂಡು ಬೀದಿ ರಂಪ ಮಾಡೋದು ಒಳ್ಳೆಯದು.'
  = ರವಿ ಮೂರ್ನಾಡು.

(ಕನ್ನಡ ಬ್ಲಾಗ್ ನ ಸದಸ್ಯರೊಬ್ಬರು ಹೊಸ ವೇದಿಕೆಯನ್ನು ಹುಟ್ಟು ಹಾಕುವ ಬಗ್ಗೆ ಪ್ರಸ್ಥಾಪಿಸಿದಾಗ ರವಿ ಸರ್ ಮೇಲಿನಂತೆ ಪ್ರತಿಕ್ರಿಯಿಸಿದ ಮಾರ್ಮಿಕ ಉತ್ತರ.)

Saturday 12 November 2011

ಕವಿ ಬದರಿನಾಥ ಪಲವಲ್ಲಿ ಅವರ "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ನಂಟರ ಅಮಾನವೀಯತೆ ಅನಾವರಣ.

ಜೀವನ ಯಾತ್ರೆಯಲ್ಲಿ ಬಂಧು-ಬಾಂಧವರು,ಇಷ್ಟ ಮಿತ್ರರು,ಹಿತೈಷಿಗಳು,ನೆಂಟರು ಹೀಗೆ-ಹತ್ತಾರು ಮುಖಗಳು ಒಂದಿಲ್ಲೊಂದು ಸ್ತರಗಳಲ್ಲಿ ಸುಖ-ದುಃಖ,ಕಷ್ಟ-ನಷ್ಟ,ನೋವು-ನಲಿವುಗಳ ಸಂದರ್ಭಗಳಲ್ಲಿ ಬದುಕಿನ ಉತ್ಕರ್ಷಕ್ಕೆ ಹಲವು ಮೆಟ್ಟಿಲುಗಳಾಗಿ,ಆಧಾರ ಸ್ಥಂಭಗಳಾಗಿ ಆಸರೆಯಾಗುವುದುಂಟು.ಕೆಲವೊಮ್ಮೆ ಇದೇ ಬಂಧು-ಬಾಂಧವರೆನಿಸಿಕೊಳ್ಳುವ ಮಹಾಶಯರನೇಕರು ತಮ್ಮದೇ ನೆಂಟನ ಸಾವಿಗೆ ಹಿಡಿ ಮಣ್ಣು ಹಾಕಲು ಬರದಿದ್ದರೂ ಅವನ ಶ್ರಾದ್ಧದೂಟಕ್ಕೆ ಚಾಚೂ ತಪ್ಪದೇ ಹಾಜರಾಗಿ ಹೇಗೆ ಅಮಾನವೀಯತೆ,ಕ್ರೂರತೆಯಿಂದ ವರ್ತಿಸುತ್ತಾರೆ;ಮನೆ ಮುರುಕರಂತೆ ನಡೆದುಕೊಳ್ಳತ್ತಾರೆ ಎಂಬ ಇನ್ನೊಂದು ಮುಖದ ಅನಾವರಣವನ್ನು "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನಗೆ ಹಾಜರು!" ಎಂಬ ಸತ್ವಪೂರಿತ ಕವನದಲ್ಲಿ ಕವಿ ಬದರಿನಾಥ ಪಲವಲ್ಲಿಯವರು ಪರಿಚಯಿಸಿರುವರು.
'ಕೌರವ ಪ್ರಸೂತಿನಿ'ಎಂದು ಅತ್ಯಂತ ಮಾರ್ಮಿಕವಾದ ಪದ ಪ್ರಯೋಗದೊಂದಿಗೆ ಹೆಣ್ಣೊಬ್ಬಳನ್ನು ಗಾಂಧಾರಿಗೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ.ಆಕೆ ನೂರಾರು ಮಕ್ಕಳನ್ನು ಹೆರಬಲ್ಲ ಮಹಾತಾಯಿಯಾಗಿದ್ದು ಈಗಲೂ ಬಸುರಿಯಾಗಿ ಪ್ರಸವಕ್ಕೆ ಸಿದ್ಧವಾಗಿದ್ದಾಳೆಂಬ ಸೋಜಿಗವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.ಸಕಲೈಶ್ವರ್ಯ ಸಂಪನ್ನೆಯಾದ ನೂರೊಂದು ಮಕ್ಕಳ ಮಹಾತಾಯಿ ಗಾಂಧಾರಿಗೂ ಕವಿತೆಯಲ್ಲಿನ ನೆಂಟನ ಹೆಂಡತಿಗೂ ಅಜಗಜಾಂತರ ವ್ಯತ್ಯಾಸ.ಬಡತನದ ಬೇಗುದಿಯಲ್ಲಿ ಕಾಲ ನೂಕುವ ಈ ನೆಂಟನ ಸಂಸಾರವನ್ನು ಯಾರಾದರೂ ಮಾತಾ-ಪಿತರು-'ಏನಪ್ಪಾ ಇಷ್ಟೊಂದು ಮಕ್ಕಳೇ?' ಎಂದು ಪ್ರಶ್ನಿಸಿದರೆ " ಇವಾ,ಇವು ಶಿವ ಕೊಟ್ಟ ಪ್ರಸಾದ,ಶಿವನಿಚ್ಛೆ "ಎಂದು ಹೇಳಿ ನಯವಾಗಿ ಜಾರಿಕೊಳ್ಳುವ ಜಾಣ್ಮೆಯ ಮಾತನ್ನು ಸೊಗಸಾಗಿ ಸಂದರ್ಭೋಚಿತವಾಗಿ ಉಪಯೋಗಿಸಿಕೊಂಡು ಆ ನೆಂಟನ ಮಕ್ಕಳ ವಯೋಮಾನದ ಅಳತೆಗೆ ಉತ್ಪ್ರೇಕ್ಷೆ ಎನಿಸಿದರೂ ಅಲಂಕಾರಿಕವಾಗಿರದೇ ಹಳ್ಳಿ ಬದುಕಿನ ಜನರ ಆಡು ಭಾಷೆಯ ಸೊಗಸಿಗೆ ಚಟಾಕು,ಪಾವು,ಸೇರು ಪದಗಳು ಮಾನಗೊಂಡಿವೆ.
ನೆಂಟ,ಆತನ ಹೆಂಡತಿ,ಇವರ ಹತ್ತಾರು ಮಕ್ಕಳು ಇವರುಗಳೆಲ್ಲ ಇಡೀ ಕವಿತೆಯ ಮುಖ್ಯ ಭೂಮಿಕೆಯಲ್ಲಿ ಕಾಣುವ ಪಾತ್ರಧಾರಿಗಳು.ಇವರು ತಮ್ಮದೇ ನೆಂಟನೊಬ್ಬನ ಸಾವಿನ ಸುದ್ಧಿ ಬಂದಾಗ ಶವಯಾತ್ರೆಗೆ ಹೋಗುವ ಔದಾರ್ಯ ತೋರುವುದಿಲ್ಲ.ಸತ್ತರೆ ನಮಗೇನು ಲಾಭವೆನ್ನುವ ಲೆಕ್ಕಾಚಾರ ಹಾಕುವ ಅದೆಷ್ಟೋ ಮಹಾಶಯರ ಧಾಷ್ಟ್ಯತನವನ್ನು ನಾವು ಸಮಾಜದಲ್ಲಿ ಕಾಣುತ್ತೇವೆ.ಪಲವಲ್ಲಿಯವರ ಈ ಕವನವೂ ಇಂಥ ಮನೆ ಮುರುಕು ನೆಂಟರ ನಿಜ ಬಣ್ಣದ ಸತ್ಯ ದರ್ಶನಮಾಡಿಸಿದೆ.

ಮುಷ್ಠಿ ಮಣ್ಣಿಗೆ ಹೋಗದ ಮನೆಹಾಳು ನೆಂಟರು,ನೆಂಟನ ವೈಕುಂಠ ಸಮಾರಾಧನೆಗೆ ಹೇಳಿ ಕಳಿಸದಿದ್ದರೂ ಪತ್ರ ಬರೆಯದಿದ್ದರೂ ಮನಸ್ಸಲ್ಲೇ ಲೆಕ್ಕಹಾಕಿ ಚಾಚೂ ತಪ್ಪದೇ ಸಕುಟುಂಭ ಪರವಾರ ಸಮೇತ ಹಾಜರಾಗಿ ಬಗೆ ಬಗೆಯ ಭಕ್ಷ್ಯ ಭೋಜ್ಯಗಳನ್ನು ರಣ ಹದ್ದುಗಳಂತೆ ಬಕ ಬಕ ಮುಕ್ಕುತ್ತಾರೆ.ಗತಿಸಿದ ನೆಂಟನ ಹಿರಿಮಗ ತಂದೆಯ ಸಾವಿನ ದುಃಖದಿಂದ ಹೊರಬರಲಾರದ ನೋವಲ್ಲಿರುವಾಗ ಕೇವಲ ಕಣ್ಣೊರೆಸುವ ತಂತ್ರವಾಗಿ ಮಗನ ಕೈ ಹಿಚುಕುವ,ಮೈ ಸವರಿ ಬೂಟಾಟಿಕೆಗೆ ಸಾಂತ್ವನ ಹೇಳುವ ಆಷಾಢಭೂತಿ ವ್ಯಕ್ತಿಯ ನೈಜ ಮನೋಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿ ಪರಿಚಯಿಸಿರುವರು.
ಹರಕು ಬಾಯಿಯ ಬಿಡಾಡಿ ನೆಂಟನಿಗೆ  ಓಸಿರಾಯನೆಂದು ಜರಿದಿರುವುದು  ಸಿಕ್ಕಿದ್ದನ್ನು ಬಾಚಿಕೊಳ್ಳುವ ತಂತ್ರಗಾರಿಕೆ ಮನುಷ್ಯನ ಲಕ್ಷಣವನ್ನು ಸಮರ್ಥವಾಗಿ ಬಿಂಬಿಸಿದೆ.ಅನಾಯಾಸವಾಗಿ ಸಿಕ್ಕ ತಿಥಿಯೂಟವನ್ನು ಹೊಟ್ಟೆ ಬಿರಿಯುವಂತೆ ತಿಂದು ಲೊಚ ಲೊಚನೆ ಪಾಯಸ ನೆಕ್ಕುತ್ತಿದ್ದರೂ 'ವಡೆಯ ಗಾತ್ರ ಮಾತ್ರ ಇತ್ತಿತ್ತಲಾಗಿ ಸಣ್ಣ ಮಾಡುತ್ತಿದ್ದಾರಲ್ಲೋ ತಮ್ಮಾ.....!' ಎಂದು ಪಕ್ಕದಲ್ಲಿ ಕುಳಿತವನ ಕಿವಿಯಲ್ಲಿ ಹರಟುವ ಈ ಓಸಿರಾಯನ ಹರಾಮತನ  ಅತ್ಯಂತ ಹೇಸಿಗೆ ಮೂಡಿಸುವುದು.
ಉಂಡ ಮನೆಯ ಸೂರು ಗಳ ಎಣಿಸುವ ಈ ಮನೆ ಮುರುಕು ನೆಂಟ ಅಷ್ಟಕ್ಕೂ ಸುಮ್ಮನಾಗದೇ ಶೆಟ್ಟರು ಸತ್ತಾಗ ಅವರ ಮನೆಯಲ್ಲಿ ಅಂಗೈಯಗಲದಷ್ಟು ಗಾತ್ರದ ವಡೆ ಮಾಡಿದ್ದರೆಂದು ಹೇಳಿ ತಿಂದ ಮನೆಗೆರಡು ಬಗೆಯುವ ಮಾತನಾಡುತ್ತಾನೆ.ಇಂಥ ನೆಂಟರನ್ನು ಸತ್ತ ಹೆಣ ತಿನ್ನಲು ಮುತ್ತಿಕ್ಕಿ ಹಾತೊರೆಯುವ ರಣ ಹದ್ದುಗಳಿಗೆ ಹೋಲಿಸಿರುವ ಕವಿ ಅವರ ಅಮಾನವೀಯ ನಡವಳಿಕೆ,ಮನೆ ಮುರುಕುತನ,ಅಗಿದು ನುಂಗಲು ಹೂಡುವ ಹತ್ತಾರು ವೇಷಗಳ ಪಾತ್ರವನ್ನು ಹಸಿ ಹಸಿಯಾಗಿ ಚಿತ್ರಿಸುತ್ತಾ ಓದುಗರ ಸೂಕ್ಷ್ಮ ಮನಸ್ಥಿತಿಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿರುವರು.ಇಂಥ ಸುಂದರ ನಿರೂಪಣೆ " ಸಾವಿಗೆ ಬಾರದ ನೆಂಟ ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ಪಡಿ ಮೂಡಿದೆ.
   = ಬನವಾಸಿ ಸೋಮಶೇಖರ್.
http://banavasimaatu.blogspot.com/
ಕವಿ ಪಲವಲ್ಲಿರವರ ಕವಿತೆಯನ್ನು ಇಲ್ಲಿ ನೋಡಿರಿ.http://badari-poems.blogspot.com/

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು!
ಹಿಂದೆಯೇ ಕೌರವ ಪ್ರಸೂತಿನಿ
ತುಂಬು ಗರ್ಭಿಣಿ ಹೆಂಡತಿ,ಶಿವ ಕೊಟ್ಟ ಮಕ್ಕಳದೇ ಸಾಲು
ಚಟಾಕು ಪಾವು ಅಚ್ಚೇರು ಸೇರು
ಸತ್ತವನ ಹಿರೀ ಮಗ
ಸಪ್ಪಗೆ ನಿಂತಿದ್ದ,ಅವನ ಕೈಯನೊಮ್ಮೆ ಹಿಚುಕಿ
ಸಾಂತ್ವನದ ಲೊಚಗುಟ್ಟಿ
ಒರೆಸೇ ಒರೆಸಿದ ಬಾರದ ಕಣ್ಣೀರ...
ಮುಂದೆ ರೈಲು ನಿಂತದ್ದು
ಎಲೆ ಹರವೋ ಮುಂಚೆಯೋ
ಮೊದಲ ಪಂಕ್ತಿಗೇ...
ಓಸಿರಾಯನಿಗೆ ಮೈಯೆಲ್ಲ ತೂತು
ತುಂಬಿಕೊಳ್ಳುತ್ತೆ ಪಂಚ ಭಕ್ಷ್ಯ!
ವಡೇ ಮೇಲೆ ವಡೇ ಪೋಣಿಸಿದ
ಲೊಚ ಲೊಚನೆ ನೆಕ್ಕಿದ ಪಾಯಸ.
ಹದಿನಾರನೇ ವಡೆ ಸಂಹಾರಕೆ ಮುನ್ನ
ಪಕ್ಕದವನ ಕಿವಿಗೆ ಪಿಸುರಿದ
ಇತ್ತಿತ್ತಲಾಗೆ ಸಣ್ಣ ಮಾಡುತಾರಲ್ಲೋ
ತಮ್ಮ ವಡೆಯ?ನೀನು ನೋಡಬೇಕಿತ್ತು
ಶೆಟ್ಟರು ಸತ್ತಾಗ ಅಂಗೈ ಅಗಲ ವಡೆ
ಅಲ್ಲೂ
ಪೊಗದಸ್ತು ಗೋಡಂಬಿ!

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು
ಕರೆದರೂ ಕರೆ ಓಲೆ ಮರೆತರೂ!
ಅಮೇಧ್ಯದಿ ನಾಣ್ಯಾನ್ವೇಷಕ
ಮಂದಿ ನೆಂಟರು,ಕಳೇಬರಕೆ ಸುತ್ತೋ ಹಸಿದ
ಹದ್ದುಗಳಂತವರು...


Monday 7 November 2011

ಕವಿ ವಸಂತ್ ಕೋಡಿಹಳ್ಳಿಯವರ " ಪ್ರೀತಿಯೆಂದರೆ ಇದೇನಾ?" ಕವಿತೆ.

ಸಖಿಯ ಸವಿ ನೋಟದ ಮಧುರ ನೆನಪುಗಳೊಂದಿಗೆ ನವೀರಾದ ಪ್ರೀತಿ ಕಟ್ಟಿಕೊಂಡು ಆ ಸಖಿಯನ್ನೇ ಸಂಗಾತಿಯಾಗಿ
ಸ್ವೀಕರಿಸಬೇಕೆಂಬ ಹಂಬಲ,ಕಾತರ,ತವಕದಿಂದ ಹುಟ್ಟಿ ಬಂದಿರುವುದೇ ವಸಂತ್ ಕೋಡಿಹಳ್ಳಿ ಇವರ "ಪ್ರೀತಿಯೆಂದರೆ ಇದೇನಾ?" ಎಂಬ ಸುಂದರ ಕವಿತೆ.


ಕವನದ ನಾಯಕನಿಗೆ ಹೆಜ್ಜೆ ಹೆಜ್ಜೆಗೂ ನೆನಪಾಗಿ ಕಾಡುವ ಗೆಳತಿಯ ಮೇಲಿನ ಒಡಲಾಳದ ಪ್ರೀತಿಯು ಹುಚ್ಚು
ಹಿಡಿಸಿದಂತಾಗಿದೆ.ಹಗಲಿರುಳೆನ್ನದೇ ಅವಳ ಮಮಕಾರದಲ್ಲಿ ಬಂಧಿಯಾಗಿ ಮೈಮರೆತು ಹೋಗಿರುವ ನಾಯಕ ಇದು ನನಗೆ ನಿನ್ನ ಮೇಲೆ ಒಡಮೂಡಿರುವ ಪ್ರೀತಿಯಲ್ಲದೇ ಬೇರೇನೂ ಅಲ್ಲ ಎಂದು ಸ್ವಗತಿಸುತ್ತಾ ಪ್ರೀತಿಯೆಂದರೇ ಇದೇನಾ....?
ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ಮನೋಜ್ಞವಾಗಿದೆ.


ನಿನ್ನ ರೂಪ ಲಾವಣ್ಯ ನನ್ನ ಹೃದಯವ ಮನಸೂರೆಗೊಂಡಿರುವುದು.ನಿನ್ನಾ ಸೌಂದರ್ಯದ ಮುಂದೆ ನನಗೆ ಬೇರೇನೂ ಕಾಣದಾಗಿದೆ ಎನ್ನುವಾಗಿನ ಭಾವ ಆ ಸಖಿಗೆ ಇದು ನಿಜ ಪ್ರೀತಿಯೇ ಎಂಬರಿವಾಗಿ ಈ ಸಖನಿಗೆ ಬೇಗನೇ ಸಿಗಬಾರದೇ ಎಂದು ಮನ ಬಯಸುವಂತಾಗುತ್ತದೆ.ಕುಂತಲ್ಲಿ ನಿಂತಲ್ಲಿ ನಡೆದಲ್ಲಿ ಎಲ್ಲೆಲ್ಲಿಯೂ ಅವನಿಗೆ ಗೆಳತಿಯ ಪ್ರತಿ
ರೂಪವೇ ಕಾಣುವುದು.ಯಾರೊಂದಿಗೆ ಮಾತಾಡಿದರೂ ಅದು ಅವಳದೇ ಧ್ವನಿಯಂತೆ ಭಾಸವಾಗುವುದು.ಅವಳ ಹೆಜ್ಜೆ ಗುರುತುಗಳೆಲ್ಲ ಗೆಜ್ಜೆಯ ಸದ್ದುಗಳಂತಾಗಿ ಆಲಾಪಿಸುತ್ತಿವೆ.ಇದು ಪ್ರೀತಿಯೋ ಭಾಸವೋ ಅರ್ಥವಾಗುತ್ತಿಲ್ಲವಾದ್ದರಿಂದ ಮನ ಬಿಚ್ಚಿ ತಿಳಿಸಿ ಬಿಡು ಎಂದು ಅವಳನ್ನೇ ಕೇಳುವ ಕವಿತೆಯ ನಾಯಕ ಇದು ಪ್ರೀತಿಯೇ ಆಗಿದ್ದರೆ ತನ್ನಲ್ಲಿ ಮೂಡಿರುವ ಪ್ರೀತಿಯ ಕಾತರತೆಗೆ ತೆರೆ ಎಳೆದು ತನ್ನನ್ನು ಸ್ವೀಕರಿಸೆಂದು ಕೇಳುವ ಆರ್ದತೆ ಇಷ್ಟವಾಗುತ್ತದೆ.


ನಿನ್ನ ತಿಳಿಯುವ ಮನದ ಹಂಬಲವು ಅಕ್ಷರಗಳ ಚಿತ್ತಾರ ಬಿಡಿಸಬೇಕೆಂಬ ಬಯಕೆ ಮೂಡಿಸುತಿಹುದು. ಆದರೇ ಆ ಬಯಕೆಗಳೆಲ್ಲ ಶುಷ್ಕವಾಗಿ ಕನಸುಗಳು ಮಸುಕಾಗಿ ಬಿಡಬಹುದೆಂಬ ಆತಂಕದಿಂದ ಊಟ ನಿದ್ದೆ ಯಾವೊಂದೂ ರುಚಿಸುತ್ತಿಲ್ಲವಾಗಿದೆ ಎನ್ನುವ ಆತನ ಮನೋಭಿಲಾಷೆ ಮಧುರವಾದುದು ಅಂತನಿಸುವುದು.  ತನ್ನಕಾತರ,ಹಂಬಲ,ತವಕಗಳಿಗೆ ಉತ್ತರ ಸಿಗದೇ ಮಂಕಾಗಿಹೋಗಿರುವ ತನಗೆ ದಯಮಾಡಿ ನಿನ್ನಂತರಂಗದಲ್ಲಿರುವುದನ್ನು ಬಾಯ್ಬಿಟ್ಟು ಇದು ಪ್ರೀತಿಯೇ ಎಂದು ಹೇಳಿ ಬಿಡು, ಎಂದು ಅಂಗಲಾಚುತ್ತಾನೆ.ಈ ಕೋರಿಕೆಯ ಮನ ಸ್ಥಿತಿ ರಸವತ್ತಾಗಿ ಮೂಡಿದೆ.


ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿ ನಿಜವೇ ಆಗಿದ್ದರೆ ನನ್ನ ಹೃದಯ ಶೂನ್ಯವಾಗುವುದಿಲ್ಲವೆಂಬ ದೃಢ ವಿಶ್ವಾಸ ನನ್ನದಾಗಿದೆ.
ಈ ಎದೆಯ ಬಾಂದಳವನ್ನು ಬರಿದಾಗಿಸದೇ ನೀನು ನನ್ನವಳಾಗಿ ಸುಖದ ಸೊದೆ ಹರಿಸುತ್ತೀ ಎಂಬ ಅಚಲವಾದ ನಂಬಿಕೆ ನನಗಿದೆ ಎನ್ನುವ ನಾಯಕ ನನ್ನ ಜೊತೆಗಾತಿಯಾಗಿ ಬಿದಿಗೆ ಚಂದ್ರಮನಂತೆ ತನ್ನ ಬಾಳ ಪಥಕ್ಕೆ ಅವಳು ಬೆಳಕಾಗುತ್ತಾಳೆಂಬ ವಿಶ್ವಾಸ ಹೊಂದಿರುತ್ತಾನೆ.ಆ ಹೆಬ್ಬಯಕೆಯೊಂದಿಗೆ ಬೆಳದಿಂಗಳ ರಾತ್ರಿಯಂತೆ ನಿತ್ಯ ನಿನ್ನ ನಿರೀಕ್ಷೆಯಲ್ಲಿಯೇ ನಿನಗಾಗಿ ಕಾಯುತ್ತರುತ್ತೇನೆ,ನನ್ನ ಕೈ ಹಿಡಿದು ಬಾಳಿಗೆ ಮನ್ನುಡಿ ಬರೆದು ದಾರಿ ದೀವಿಗೆಯಾಗೆಂದು ಅವಳನ್ನು ಕೋರುವ
ಕವಿತೆಯ ನಾಯಕನ ಅಭಿಲಾಷೆ,ಮನದಿಂಗಿತ'ಪ್ರೀತಿಯೆಂದರೆ ಇದೇನಾ...? "ಕವಿತೆಯಲ್ಲಿ ಮೋಹಕವಾಗಿ ಮೂಡಿಬಂದಿದೆ.ಈ ಸುಂದರ ಕವಿತೆಯನ್ನು ನೀವೂ ಓದಿ, ಆಸ್ವಾದಿಸಿ ನನ್ನೀ ಆಶಯದ ನುಡಿಗಳಿಗೆ ಪ್ರತಿಕ್ರಿಯಿಸಿರಿ.

= ಬನವಾಸಿ ಸೋಮಶೇಖರ್.

 ------ಕವಿತೆ ಹೀಗಿದೆ ನೋಡಿ.-------


ಪ್ರೀತಿಯೆಂದರೆ ಇದೇನಾ ?.
----------------------------

ಕತ್ತಲಾದರೆ ಸಾಕು
ಕಣ್ಣಮುಂದೆ ಬಂದು ಕಾಡುವೆ,
ಕಣ್ಣು ಮುಚ್ಚಿದೊಡನೆಯೆ
ನೆನಪಾಗಿ ಮುಂದೆ ನಿಲ್ಲುವೆ,
ನಿನ್ನದೇ ಯೋಚನೆಯಲ್ಲಿ ಹಗಳಿರುಳೂ
ಮಿಂದು ಮೀಯುವಂತಾಗುತ್ತಿದೆ.
ಗೊತ್ತಾಗುತ್ತಿಲ್ಲ ಹೇಳಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ರೂಪವೊಂದನ್ನು ಬಿಟ್ಟು
ಬೇರೇನು ಕಾಣದಾಗಿದೆ,
ನನ್ನ ಹೃದಯವ್ಯಾಕೊ ಸದಾ ?
ನಿನ್ನನ್ನೇ ಹಂಬಲಿಸುತ್ತದೆ,
ದಾರಿಯಲ್ಲಿ ಯಾರೇ ನಡೆದರೂ
ನಿನ್ನದೇ ಗೆಜ್ಜೆ ಸದ್ದು,
ಯಾರು ಮಾತನಾಡಿದರೂ
ನಿನ್ನದೇ ದ್ವನಿ.
ಇದರ ಅರ್ಥವನ್ನು
ಅರಿಯಾಲಾಗುತ್ತಿಲ್ಲ ತಿಳಿಸಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ಬಗ್ಗೆ ತಿಳಿಯುವ ಹುಚ್ಚಾಗುತ್ತಿದೆ,
ಕಥೆ ಕವನ ಬರೆಯುವ
ಮನಸ್ಸು ಹೆಚ್ಚಾಗುತ್ತಿದೆ
ಆಸೆಗಳು ಅತಿಯಾಗುತ್ತಿವೆ,
ಬಯಕೆಗಳು ಬಣಗುಡುತ್ತಿವೆ,
ಕನಸುಗಳು ಕತ್ತಲಾಗುತ್ತಿವೆ,
ಊಟವು ಬೇಕಿಲ್ಲ,
ನಿದ್ರೆಯು ಬರುತ್ತಿಲ್ಲ,
ನನಗೂ ತಿಳಿಯುತ್ತಿಲ್ಲ,
ದಯಮಾಡಿ ನುಡಿದುಬಿಡು,
ಪ್ರೀತಿಯೆಂದರೆ ಇದೇನಾ ?.

ಇದು ನಿಜವಾಗವಾಗಿಯೂ
ಪ್ರೀತಿಯೇ ಆಗಿದ್ದರೆ ?.
ನಿನಗಾಗಿ ಹಂಬಲಿಸುತ್ತಿರುವ
ನನ್ನ ಹೃದಯಕ್ಕೆ
ಮುಕ್ತಿಯನ್ನಾದರೂ
ದೊರಕಿಸುತ್ತೀಯೆಂದು ನಂಬಿರುವೆ.

ನಿನಗಾಗಿ ಹುಣ್ಣಿಮೆಯ
ರಾತ್ರಿಯಂದು ಕಾಯುತ್ತಿರುತ್ತೇನೆ !
ಚಂದ್ರನಂತೆ ನನ್ನ ಬಾಳಿಗೆ ಬಂದು !..
ಬೆಳಕಂತೆ ಸೇರಿಕೋ …!..

----------------------
ವಸಂತ್ ಕೋಡಿಹಳ್ಳಿ

Sunday 6 November 2011

ಕಂಬಾರರ ಬಗ್ಗೆ ಪಾಪು ಟೀಕೆ ಸರ್ವಥಾ ಯೋಗ್ಯವಾದುದಲ್ಲ!




" ಕನ್ನಡದ ಹೆಸರಾಂತ ಪತ್ರಿಕೋದ್ಯಮಿ,ಸಾಹಿತಿಯಾಗಿ ಮನೆಮಾತಾಗಿರುವ ಡಾ|| ಪಾಟೀಲ ಪುಟ್ಟಪ್ಪ (ಪಾಪು) ನವರು ಈ
 ನಾಡು ಕಂಡ ಹೆಮ್ಮೆಯ ಸಾಹಿತಿ ಡಾ||ಚಂದ್ರಶೇಖರ್ ಕಂಬಾರ ಅವರ ಬಗ್ಗೆ ಮಾಡಿದ ಟೀಕೆಯ ಧಾಟಿ ಕೇಳಿ ಸಖೇದಾಶ್ಚರ್ಯವಾಗುವುದು.ಕನ್ನಡ ನಾಡಿನ ಸಾಹಿತ್ಯ ಸರಸ್ವತಿಯ ಮುಕುಟ ಮಣಿಗಳಲ್ಲಿ ಪಾಪು ಹಾಗೂ ಕಂಬಾರರು ಶ್ರೇಷ್ಠವಾದುದನ್ನೇ ನೀಡಿ ಹೆಸರು ಮಾಡಿದವರು.ನಾವು ಪಾಪು ರವರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು.
ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಪಾಪುರವರಿಂದ "ಕಂಬಾರರಿಗಿಂತ ಬೈರಪ್ಪ ಅರ್ಹರು"(ಪ್ರಜಾವಾಣಿ 21-09-2011) ಎಂದು ಹೊರಹೊಮ್ಮಿದ ಅಭಿಪ್ರಾಯ ಕೇಳಲು ಅತೀವ ದುಃಖವಾಗುವುದು.ವ್ಯಕ್ತಿ ವ್ಯಕ್ತಿಗಳ ನಡುವೆ ಯೋಗ್ಯತೆಯ ವ್ಯತ್ಯಾಸ ಕಲ್ಪಿಸಿ ಅವರಿಗಿಂತ ಇವರು ಶ್ರೇಷ್ಠರು ಎನ್ನುವ ಮನದಿಂಗಿತ ಸರ್ವಥಾ ಯೋಗ್ಯವಾದುದಲ್ಲ.ಬೈರಪ್ಪನವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ಸಾಹಿತ್ಯ ವಾಗ್ದೇವಿಯ ಹಿರಿಮೆಯನ್ನು ಹೆಚ್ಚಿಸಿದ ಮಹಾನ್ ನಕ್ಷತ್ರ ಅವರು.ಅವರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ,ಹೆಮ್ಮೆಪಡುತ್ತಾರೆ.ಅವರೂ ಜ್ಞಾನ ಪೀಠಕ್ಕೆ ಅರ್ಹವಾದ ಶ್ರೇಷ್ಠತಮವಾದ ಸಾಹಿತ್ಯವನ್ನು ಈ ನಾಡಿಗೆ ಧಾರೆಎರೆದಿರುವರು.ಕನ್ನಡ ಸಾಹಿತ್ಯ ಸರಸ್ವತಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರಬಹುದು.ಆದರೆ ಅದು ತಾತ್ವಿಕ ಬದ್ಧತೆಯಿಂದ ಕೂಡಿ ವಿಧಾಯಕತೆಯನ್ನು ಹೊಂದಿರಬೇಕಾದುದು ಅತ್ಯಂತ ಅಗತ್ಯವಾದುದು.ನಾಡಿಗೆ ಇನ್ನೊಂದು ಜ್ಞಾನಪೀಠ ತಂದು ಕೊಟ್ಟ ಡಾ|| ಕಂಬಾರರಿಗೆ ಅಭಿನಂದನೆ ಸಲ್ಲಲೇಬೇಕು."

-ಬನವಾಸಿ ಸೋಮಶೇಖರ್,ಮಂಗಳೂರು.


Sunday 30 October 2011

ರವಿ ಮೂರ್ನಾಡು ಅವರ " ಹೆಚ್ಚೆಂದರೆ ನಾನು.........." ಕವಿತೆ.

ಚಿಂದಿ ಆಯುವ ಹುಡುಗನ ಜೀವನ ಗಾಥೆಯನ್ನು ಭಾವಾತ್ಮಕವಾಗಿಯೂ ಚಿಂತನಾತ್ಮಕವಾಗಿಯೂ ಎಳೆ ಎಳೆಯಾಗಿ ಬಿಡಿಸಿ ಹೇಳುವ ಕವಿ ತನ್ನ ಮನಸ್ಸಿನಾಳದಲ್ಲಿ ಹುದುಗಿರುವ ದುಗುಡವನ್ನು ಹಗುರಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಆಹುಡುಗನ ವಾಸ್ತವ ಬದುಕಿನ ನೈಜ ಚಿತ್ರಣವನ್ನು ವಿಷಧೀಕರಿಸುವ ರೀತಿ ಕವಿ ರವಿ ಮೂರ್ನಾಡು ಅವರ "ಹೆಚ್ಚೆಂದರೆ ನಾನು...." ಕವಿತೆಯಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ.

ಭಿಕ್ಷುಕನ ನೈಜ ಸ್ಥಿತಿಯನ್ನು ಅನಾವರಣ ಮಾಡುತ್ತಾ,ಕರುಣೆಯಿದ್ದರೆ ಕಣ್ಣೆತ್ತಿ ನೋಡಿ ಬಿಡಿಗಾಸು ಹಾಕಿ ನನಗೂ ಬದುಕನ್ನು ನೀಡಿರೆಂದು ಗೋಗರೆಯುವ ಮನೋಬಾವ ಕರುಣಾಜನಕವಾಗಿದೆ. ಒಪ್ಪೊತ್ತಿನ ತುತ್ತಿಗಾಗಿ ನೀವು ಬಿಸಾಕಿದ ಎಂಜಲೆಲೆಗೆ  ಹಕ್ಕಿಯಂತೆ ಹಾರಿ ಮುತ್ತಿಕ್ಕಲು ಬಂದಿದ್ದೇನೆ ಎನ್ನುವಾಗಿನ ಚಟಪಡಿಕೆ ಹೃದಯವಿದ್ರಾವಕವಾಗಿದೆ.ತನ್ನ ಕೆದರಿದ ಕೂದಲು,ಜಿಡ್ಡುಗಟ್ಟಿದ ಕೊಳೆ,ಕುರುಚಲು ಗಡ್ಡವನ್ನು ನೋಡಿ ಅಸಹ್ಯಪಡದೇ ಹ್ರದಯ ತುಂಬಿದರೆ ನನ್ನಬಗ್ಗೆ ಕರುಣೆದೋರಿ ತುತ್ತು ಹಾಕಿರೆನ್ನುವಾಗಿನ ದ್ರಶ್ಯ ಮನಕಲಕುವುದು.ಯಾರ ಮನ ಸಂತೋಷಕ್ಕೆ,ಅಸಹಾಯಕತೆಯ ಹಾದರಕ್ಕೆ ನನ್ನ ಜನ್ಮವಾಗಿಯೋ ನಾ ಕಾಣೆ;ಅಕ್ಕರೆ-ಕಕ್ಕುಲತೆಗಳಿಂದ ವಂಚಿತನಾದರೂ ಅನಾಥಾಶ್ರಮದ ನೆರಳಿನಲ್ಲಿ ಬೆಳೆಯುತ್ತಿರುವ ಬಾಲಕ ನಾನು ಎಂದು ತನ್ನ ಬಗ್ಗೆ ಪರಿಚಯಿಸಿಕೊಳ್ಳವ ಅನಾಥ ಬಾಲಕ,ತನ್ನನ್ನು ನಿರ್ಲಕ್ಷ್ಯ ಮಾಡದೇ ಸಹಾನುಭೂತಿ,ಅನುಕಂಪ ತೋರಿ ಕಾಪಾಡಿರೆನ್ನುವ ಕೂಗು ಹ್ರದಯ ಚುಚ್ಚುವುದು.ಹುಟ್ಟಿದ ತಪ್ಪಿಗೆ, ಹೊಟ್ಟೆಯ ಪಾಡಿಗಾಗಿ ನನ್ನ ಅಸಹಾಯಕತನವನ್ನೇ ಬಂಡವಾಳ ಮಾಡಿಕೊಂಡು ನಿಮ್ಮ ಬಳಿಸಾರಿದ್ದೇನೆ.ಈ ನನ್ನ ದೈನ್ಯೇಸಿ ಸ್ಥಿತಿಗಾಗಿ ಕೋಪಿಷ್ಠರಾಗದೇ,ಮನ ಬಂದಂತೆ ನನ್ನ ದೂಷಿಸದೇ ಪ್ರೀತಿ ತೋರಿ ನನ್ನನ್ನೂ ಮನುಷ್ಯನನ್ನಾಗಿ ನೋಡಿರೆಂದು ನಿವೇದಿಸುವ ಬಾಲಕನ ಕೂಗು ಅರಣ್ಯರೋದನವೆನಿಸುವದು.ಶೋಷಣೆ,ಅನ್ಯಾಯ,ದೌರ್ಜನ್ಯ ಮತ್ತು ತುಳಿತಕ್ಕೊಳಗಾದ ನಾನು 
ಕರುಣೆ,ಹ್ರದಯ,ಮನಸ್ಸಿದ್ದರೆ ಈ ಬದುಕು ಸಾರ್ಥಕಗೊಳ್ಳಲು ಕೈ ಹಿಡಿದು ಮುನ್ನಡೆಸಿ,ನನ್ನನ್ನು ನಿಮ್ಮಲೊಬ್ಬನ್ನಾಗಿ ಸ್ವೀಕರಿಸಿ ಎಂದು ಹೇಳುವಾಗ ಎಂಥ ಕಠೋರ ಮನಸ್ಸಾದರೂ ಕರಗಿ ನೀರಾಗುವುದು ಎಂಬ ಆಶಯವನ್ನು ಕವಿ ಮೂರ್ನಾಡರು ಅರ್ಥಗರ್ಭಿತವಾಗಿ,ಹ್ರದಯ ವಿದ್ರಾವಕವಾಗಿ 'ಹೆಚ್ಚೆಂದರೆ ನಾನು ...'ಕವಿತೆಯಲ್ಲಿ ಬಿಂಬಿಸಿರುವರು."ನನ್ನ ಈ ಎಲ್ಲಾ ಅನಿಸಿಕೆಗಳು ಅವರ ಆಶಯಕ್ಕೆ ಖಂಡಿತಾ ನ್ಯಾಯ ಒದಗಿಸುವುದಿಲ್ಲ.ನೀವೆ ಓದಿ ಆಸ್ವಾದಿಸಿ ಪ್ರತಿಕ್ರಿಯೆ ನೀಡಬಹುದು.

                    -ಬನವಾಸಿ ಸೋಮಶೇಖರ್.

ಕವಿತೆಯನ್ನು ಇಲ್ಲಿ ನೋಡಿರಿ

ಕೆದರಿದ ಕೂದಲು-ಕುರುಚಲು ಗಡ್ಡ
ಜಿಡ್ಡು-ಕೊಳೆ ಮೆತ್ತಿಕೊಂಡ
ಭಿಕ್ಷುಕನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ತಿರುಗಿಸಿಕೊಳ್ಳದಿರಿ ಹೃದಯಗಳೇ
ಕರುಣೆಯಿದ್ದರೆ ಕಣ್ಣೆತ್ತಿ ನೋಡಿ
ಚಿಲ್ಲರೆಯಿದ್ದರೆ ಪುಡಿಗಾಸು ಹಾಕಿ
ಹೆಚ್ಚೆಂದರೆ ನಾನೂ ಒಬ್ಬ ಭಿಕ್ಷುಕ !


ಒಂದು ಹೊತ್ತಿನ ಅನ್ನದ ಆಸೆಗೆ
ಗೂಡಿನಿಂದ ಹಾರಿಬಂದ ಹಕ್ಕಿಯತೆ
ನೀವು ಬಿಸಾಕಿದ ಎಂಜಲೆಲೆಗೆ ಮುತ್ತಿಕೊಂಡ
ಚಿಂದಿ ಆಯುವ ಹುಡುಗರ ಬಗ್ಗೆ ಕವಿತೆ ಬರೆಯುತ್ತೇನೆಂದು
ಅಸಹ್ಯ ಪಡದಿರಿ ಹೃದಯಗಳೇ
ಎದೆತುಂಬಿ ಬಂದರೆ ಕಣ್ಣೀರು ಸುರಿಸಿ
ಅನ್ನವಿದ್ದರೆ ಕರೆದು ತಿನ್ನಿಸಿ
ಹೆಚ್ಚೆಂದರೆ ನಾನೂ ಒಬ್ಬ ಚಿಂದಿ ಆಯುವ ಹುಡುಗ..!

ಯಾರದೋ ತೃಪ್ತಿಯ ಸ್ಪರ್ಶಕೆ
ಬದುಕು ಸವೆಸಿದ ಹಾದರಕೆ ಹುಟ್ಟಿದ
ಮಮತೆ-ವಾತ್ಸಲ್ಯ ವಂಚಿತ
ಅನಾಥಾಶ್ರಮದ ಮಗುವಿನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ಸಿಂಡರಿಸಿದರಿ ಹೃದಯಗಳೇ
ಮನಸ್ಸಿದ್ದರೆ ಪ್ರೀತಿ ನೀಡಿ
ನಿಮ್ಮಲ್ಲಿದ್ದರೆ ಮಮತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ಅನಾಥಾಶ್ರಮದ ಬಾಲಕ ..!


ಹುಟ್ಟಿದ ತಪ್ಪಿಗೆ ಹೊಟ್ಟೆಯ ಚಿಂತೆ
ಅಸಹಾಯಕತೆಯೇ ಬಂಡವಾಳ
ಶ್ರೀಮಂತರ ಮುಂದೆ ಕೈಕಟ್ಟಿ ನಿಂತ
ಗುಲಾಮರ ಬಗ್ಗೆ ಕವಿತೆ ಬರೆಯುತ್ತೇನೆಂದು
ಹುಬ್ಬು ಗಂಟಿಕ್ಕದೀರಿ ಹೃದಯಗಳೇ
ಮಾನವರಾದರೆ ಮಾನವೀಯತೆ ಇರಲಿ
ಸಾಧ್ಯವಾದರೆ ಸಮಾನತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ದೇವರ ಗುಲಾಮ..!

ಹದಿ ಹರೆಯದ ತುಡಿತಗಳ ಬಗ್ಗೆ
ಕಾಮ-ಪ್ರೇಮದ ಕನಸುಗಳ ಬಗ್ಗೆ
ಸ್ವಾರಸ್ಯಕರ ಕವಿತೆ ಕವಿತೆ ಬರೆಯುತ್ತೇನೆಂದು
ಬೆನ್ನ ತಟ್ಟದಿರಿ ಹೃದಯಗಳೇಹಾದಿ ತಪ್ಪದಂತೆ ಬೆಳಕ ನೀಡಿ
ಬದುಕ ಸಾರ್ಥಕತೆಗೆ ಹಿತನುಡಿಯಾಡಿ
ಹೆಚ್ಚೆಂದರೆ ನಾನೂ ನಿಮ್ಮವರಲ್ಲೊಬ್ಬ...!
http://www.ravimurnad.blogspot.com/

Sunday 16 October 2011

" ಪ್ರಖ್ಯಾತಿ-ಕುಖ್ಯಾತಿ"



ಸಿಟ್ಟು ಆಕ್ರೋಶ ಕೋಪಾತಾಪಗಳೆಲ್ಲ
ನಿನ್ನ ಹೋರಾಟದ ಅಸ್ತ್ರಗಳಾಗಿದ್ದವು
ಬಾಯಲ್ಲಿ ಬೆಂಕಿಯುಗುಳುತ್ತಲೇ ಬಡಿದೆಬ್ಬಿಸಿ
ಸರ್ವರ ನೋವು ನಲಿವು ಭವಣೆಗಳಿಗೆಲ್ಲ
ಸದಾ ಸ್ಪಂದಿಸುವ ಧೀಃಶಕ್ತಿಯಾಗಿದ್ದವನು ನೀನು!

ತತ್ವ ನೀತಿ ಸಿದ್ಧಾಂತಗಳಾಗ ನಿನ್ನುಸಿರಾಗಿದ್ದವು
ಹಳ್ಳಿ ಪಟ್ಟಣ ರಾಜ ಬೀದಿ ಎಲ್ಲೆಲ್ಲೂ ನಿನ್ನಾ
ಹೋರಾಟದ ಕಾವು ಬಹುರೂಪ ಪಡೆದಿತ್ತು
ಭಲೇ ಚಳುವಳಿಗಾರ ನೀನೆಂದು ಪ್ರಖ್ಯಾತಿ!!

ನಿನ್ನ ದಿಟ್ಟ ನೇರ ನಿಷ್ಠುರ ನುಡಿಗಳಿಗೆ ಸೋತಾ
ಮಂದಿ ಮನ್ನಣೆ ನೀಡಿ ರತ್ನ ಸಿಂಹಾಸನ ಅರ್ಪಿಸಿದ್ದರು
ಮತ್ತಷ್ಟು ಮೊಗದಷ್ಟು ಗಟ್ಟಿಯಾಗ ಬಯಸಿದ್ದ ನೀ
ಮೌಲ್ಯಗಳಿಗೆ ತಿಲಾಂಜಲಿಯಿತ್ತು ಹೊಸ ಸಂಪ್ರದಾಯ ಸೃಷ್ಟಿಸಿದಿ!!!

ಬಾಳ ಬುದ್ಧಿವಂತನಾದ ನೀನು ಛಲದಂಕಮಲ್ಲ
ಚಾಣಾಕ್ಷತೆಯಲ್ಲಿ ಎತ್ತಿದ ಕೈಯಾಗಿದ್ದ ನೀ ಚಾಣಕ್ಯ
ಬಹುಫರಾಕು ಹೇಳುತ್ತಿದ್ದ ನಿನ್ನ ಬಂಟರು ಮಾತ್ರ
ನಗೆಪಾಟಲೀಗೀಡಾಗುತ್ತಾ ಜನಕೆ ವಿನೋದವಾದರು!!!!

ನಿನ್ನಾ ವಿವೇಕ ವಿಚಾರ ಲಹರಿ ಎಲ್ಲವೂ ಮಸುಕಾದವು
ಗುಡಿ ಗುಂಡಾರ ಜ್ಯೋತಿಷ್ಯವೆಂದೆಲ್ಲ ನಂಬಿ ಮೌಡ್ಯದ ದಾಸನಾದಿ
ಸ್ವಾರ್ಥಕ್ಕೆ ಜೋತು ಬಿದ್ದು ತಪ್ಪು ಮಾಡಲು ಹೊರಟಿ
ಅಂತಸ್ತಿನಮಲು ಮೈಮೇಲೇರಿ ನಿನ್ನತನವೆಲ್ಲ
ನಿಸ್ತೇಜವಾಗಿ ಕಳೆಗುಂದುತ್ತಾ ಪೇಲವಗೊಂಡಿತು!!!!!

ರತ್ನ ಸಿಂಹಾಸನ ಉರುಳಿ ಬಿದ್ದು ನ್ಯಾಯದೇವಿಗೆ
ನಿನ್ನಹವಾಲು ಮುಟ್ಟಿದಾಗ ಕಣ್ಮುಚ್ಚಿಕುಳಿತಿದ್ದಾಕೆಯೊಳ
ಗಣ್ತೆರೆದು ನೋಡಿ ತೂಕ ಮಾಡಿ ಹೇಳಿಯೇ ಬಿಟ್ಟಳು
ಕೃಷ್ಣಾಶ್ರಮಕ್ಕೆ ನೀ ಹೋಗುವುದನ್ನಾಕೆಗೆ ತಪ್ಪಿಸಲಾಗಲೇ ಇಲ್ಲ
ಮಹಾಪತನ ಹೊಂದಿ ನೀ ಲೋಕ ಕುಖ್ಯಾತಿ ಪಡೆದು ಬಿಟ್ಟಿ
ಹೇಳು ನೀ ! ಇದಕೆ ವಿಧಿಯಾಟ ಎನ್ನಲೇ ? ವಿಪರ್ಯಾಸ ಎನ್ನಲೇ ?
ಬನವಾಸಿ ಸೋಮಶೇಖರ್.
http://banavasimaathu.blogspot.com/

Saturday 15 October 2011

"ಬಾಳ ದೀಪಿಕೆ"

ಎದೆಯಾಳದಿಂದ ಬಂದಿತು ಪ್ರೀತಿ
ಮನಸಾಗಿ ಸೇರಿತು ಆರದ ಜ್ಯೋತಿ
ಹೊನಲಾಗಿ ಹರಿಯಿತು ಬಾಳಿನ ರೀತಿ
ಒಲವಾಗಿ ಗೆಲುವಾತು ಜೀವಕ್ಕೆ ನೀತಿ!

ಮಾಗಿಯ ಬಿಸಿಲಿಗೆ ಮಲ್ಲಿಗೆಯ ಕಂಪು
ಗಗನದ ತಾರೆಗೆ ಮಿನುಗುವ ಸೊಂಪು
ಎನ್ನೊಡಲಿನೊಲವಿಗೆ ನೀನೇ ತಂಪು
ಪ್ರಭೆಯ ಬೀರುತ ಎನ್ನೆದೆಗೆರೆದೆ ವಾತ್ಸಲ್ಯದ ಇಂಪು.!!



  = ಬನವಾಸಿ ಸೋಮಶೇಖರ್.

Thursday 8 September 2011

"ಗೆಳೆಯನ ಬಂಗಾರದ ಬಟ್ಟಲು ಜೈಲು ತಟ್ಟೆಯಾದ ಕಥೆ"

ಗೆಳೆಯಾ........!
ಕಡುಕಷ್ಟದಲಿ ನೀ ಬದುಕ ಪ್ರಾರಂಭಿಸಿದಿ
ಪಡಬಾರದ ಪಾಡು ಪಟ್ಟಿ
ಹಗಲಿರುಳೆನ್ನದೆ ಪರದಾಡುತ್ತಲೇ ಇದ್ದಿ
ಸುಖದ ಬಾಳಿಗಾಗಿ;ಕಂಡ ಕನಸಿಗಾಗಿ!


ಅಂದುಕೊಂಡದ್ದೆಲ್ಲ ಮಾಡಲು ಹೊರಟಿ
ಆಡು ಮುಟ್ಟದ ಸೊಪ್ಪುಂಟೇ,ನೀನು ಮಾಡದ ದಂಧೆಯುಂಟೇ
ಹಿರಿಮೆ-ಗರಿಮೆ-ಮಹಿಮೆ ನಿನ್ನ ಮೈಗೂಡಿದವು
ಭೂರಮೆ ನಿನ್ನ ಕೈ ಬೀಸಿ ಕರೆದು
ಮಡಿಲು ತುಂಬಿಕೊಂಡು ಉತ್ತುಂಗಕ್ಕೆ
ಕರೆದೊಯ್ದು ಬಾನಕ್ಕಿ ಮಾಡಿದಳು,
ಗೆಳೆಯಾ....ನೀ ಮಟ್ಟಿದ್ದೆಲ್ಲ ಚಿನ್ನ!

ಆದರೇ ನೀನು ಮಾಡಿದ್ದೇನು ಗೆಳೆಯಾ..?
ನಗುಮುಖದ ನೀ ಅರಿಪಡೆಯನ್ನೂ ಅವಚಿಕೊಂಡೆ
ನಿನ್ನ ಆಸೆಯಾಮಿಷ ದುರಾಸೆ ನೂರ್ಮಡಿಯಾಗುತ್ತಾ
ಭೂತಾಯ ಬಸಿರನ್ನು ಬಗೆಬಗೆಯುತ್ತಲೇ ಇತ್ತು
ನಿನ್ನೊಡಲ ದಾಹವೂ ತಣಿಯದಾಯಿತು
ಅವನಿಯ ಅಡಿಯಿಂದ ಮುಡಿಯನೆಲ್ಲ ವ್ಯಾಪಿಸಿತು
ಅವಳ ಮೈಮನವೆಲ್ಲವೂ ಕೆಂಪಾಯಿತು!

ಆದರೀಗ ಏನಾಯಿತು ಗೆಳೆಯಾ...?
ಭೂತಾಯವ್ವನ ಒಡಲ ದಳ್ಳುರಿ ತಟ್ಟೇಬಿಟ್ಟಿತು ನಿನಗೆ
ನಿನ್ನಾ ಕಸವರವೆಲ್ಲ ಕಸಬರಿಕೆಯಾಯಿತು
ಮೀಸೆಯೂ ಮಣ್ಣುಪಾಲಾಯಿತು
ವಜ್ರಖಚಿತ ಕಿರೀಟವೂ ಕಳಚಿ ಬಿತ್ತು
ವೈಭೋಗದರಮನೆ ನಿನ್ನವಸ್ಥೆಗೆ ಮರುಕ ಪಡುತಿಹುದು
ಬಂಗಾರದ ಬಟ್ಟಲು ಜೈಲು ತಟ್ಟೆಯಾಯಿತು !!

ಗೆಳೆಯಾ.....!
ನಿನ್ನ ಜೀವನಗಾಥೆ ಯಾರಿಗೂ ಮಾದರಿಯಲ್ಲ
ನಿನ್ನ ಹಾಗೆ ಜೀವಿಸಬೇಕು ಎನ್ನುವರಿಗೆ
ನಿನ್ನ ಕಥೆ ಭೂತವಾಗಿ ಕಾಡದೇ ಬಿಡಲ್ಲ
ನಿನ್ನ ಮೇಲಾಣೆ!! ಇದು ಸತ್ಯ ಸತ್ಯ ಸತ್ಯ!!!

      --ಬನವಾಸಿ ಸೋಮಶೇಖರ್.

Sunday 21 August 2011

" ಎಲೆ ಬಾಲೆ ನೀನು......."


ಎಲೆ ಬಾಲೆ ನೀನು
ಯವೌನದ ಹೊಳೆಯಲಿ
ಆಡದಿರು ಈಜಾಟ!
                        ಎಲೆ ಬಾಲೆ,ನೀ ಆಡದಿರು ಈಜಾಟ.


ಜೇನುಮಳೆ ಬೀಳುವುದು
ಸುಖದ ಹೊಳೆ ಹರಿಯುವುದು
ಬಾಡದಿರು ಬಳ್ಳಿಯಾಗಿ!
                             ಎಲೆ ಬಾಲೆ,ಬಾಡದಿರು ನೀ ಬಳ್ಳಿಯಾಗಿ.


ಅರಳು ಮಲ್ಲಿಗೆಯಾಗು
ಕೆಂಡ ಸಂಪಿಗೆಯಾಗು
ಬೀರು ನಿನ್ನ ಪರಿಮಳವ!
                                ಎಲೆ ಬಾಲೆ,ಬೀರು ನೀ ಪರಿಮಳವ.

ಕೆಂದುಟಿಯ ಚಲುವೆ ನೀನು
ಮುದ್ದು ಮೊಗದ ರಾಣಿ ನೀನು
ನಿನಗಾಗಿ ಕಾದಿಹುದು ಹಾಲುಜೇನು!
                                 ಎಲೆ ಬಾಲೆ,ನಿನಗಾಗಿ ಕಾದಿಹುದು ಹಾಲುಜೇನು.


ಅಂಜಬೇಡ ಅಳುಕ ಬೇಡ
ಮುಂದೆ ಬರಲು ಹೆದರಬೇಡ
ಜೀವನವೇ ಹೋರಾಟ!
                              ಎಲೆ ಬಾಲೆ,ಜೀವನವೇ ಹೋರಾಟ.

 
  -ಬನವಾಸಿ ಸೋಮಶೇಖರ್.

Saturday 20 August 2011

"ಸುತಪಿತನ ಕಥನ"

" ಸುತ"

ಸುತನೆಂಬ ಬಂಧುತ್ವ
ಅಷ್ಟೇ ಸಾಕಿತ್ತು
ನಿನಗೆ!
...ಆದರೇ ನೀ ಮಾಡಿದ್ದೇನು ?
ನಿನ್ನ ದುರಾಸೆಯ
ಲೋಭವು
ಪಿತನಾಧಿಪತ್ಯವ ಆಹುತಿ ಪಡೆಯಿತು!
ಬುದ್ಧಿಗೇಡಿ,ನೀ ಮಾಡಿದ್ದು ಸರಿನಾ?

"ಪಿತ"

ಸುತನ ವಾತ್ಸಲ್ಯಕೆ
ಜೋತು ಬಿದ್ದಿ
ನಿನ್ನ ಕರ್ತವ್ಯ ಮರತಿ!
ಧನ ದಾಹ,ಭೂ ದಾಹ
ಏನ ತಂದಿತು ನಿನಗೆ ?
ಜನ ಕೊಟ್ಟ ಕಿರೀಟ ಉರುಳಿ
ಮುಖಗೇಡಿಯಾದಿ!
ಹೊಣೆಗೇಡಿ,ಇದು ನಿನಗೆ ಬೇಕಿತ್ತೆ?
                     --ಬನವಾಸಿ ಸೋಮಶೇಖರ್.

Thursday 18 August 2011

"ಪರಮಾಧಿಕಾರಿಗೆ"

ನೋಡು ನೀ....
ಈ ವೇಷಗಾರರ ಆಟವನ್ನು
ಇವರಾಡುವ ನಾಟಕವನ್ನು
ಇವರಾ ಕಪಿ ಚೇಷ್ಟೆಯನ್ನು!
ಮನ ಬಂದಂತೆ ಮಾತಾಡಿ
ಮನಸು ಕೆಡಿಸುವೀ
ಮಲೀನರ ಬಹುರೂಪವನು ನೀ ನೋಡು!
ಮಾತಿಗೆ ಮಾತು ಕದ್ದು
ಎದೆ ಮೇಲೆ ಕೈಯಿಟ್ಟು ಹೇಳಿ
ಮನಃಶಾಂತಿ ಕಳಕೊಂಡು
ದಿನರಾತ್ರಿ ವಿಲವಿಲನೆ ಒದ್ದಾಡಿ
ನಿದ್ದೆಗೆಟ್ಟು ಕಳೆಗೆಟ್ಟು ಹೋದೀ
ಮತ ಭ್ರಷ್ಟ ಮತಿ ಭ್ರಷ್ಟ
ಡೊಂಕು ಬಾಲದ ನಾಯಕರ
ಹುಚ್ಚಾಟವನು ನೀ ನೋಡು!

ಮಗ್ಗುಲು ಮುಳ್ಳಾಗಿ
ದುಃಸ್ವಪ್ನರಾಗಿ ನಿತ್ಯವೂ
ನವಗಾಳ ಹಾಕುತ್ತಾ ಗಳಿಗೆ ಗಳಿಗೆಗೂ
ಕುಟುಕುತ್ತಿರುವೀ ಭಿನ್ನರ ವ್ಯವಹಾರ
ರಂಪಾಟ ಜಂಪಾಟವನು ನೀ ನೋಡು!

ತತ್ವ ನೀತಿ ಸಿದ್ಧಾಂತವೆಂದು
ಅರುಹಿದವರು ಹಲವರು
ಹತ್ತರಕೂಡ ಹನ್ನೊಂದಾದವರು ಅನೇಕರು
ನಂಬಿದ ಶಿಸ್ತಿಗೆ ಬೆನ್ನು ಬಿದ್ದವರು ಹತ್ತಾರು
ಆಸೆಯಾಮಿಶ ದುರಾಸೆಗೆ ಒಳಗಾದವರು ನೂರಾರು
ಅಂತೂ ಒಪ್ಪಿಗೆಯ ಮುದ್ರೆಯೂರಿ,
ಜೈಕಾರ ಹಾಕಿಯೇ ಬಿಟ್ಟರು ಸಾವಿರಾರು!

ನೋಡು ನೋಡು ನೀ
ನೋಡುತ್ತಲೇ ಇರು
ಆಟ ಮುಗಿದಾದ ಮೇಲೆ
ಮಗದೊಂದು ಆಟಕ್ಕಾಗಿ ಕಾದು ಕುಳಿತು
ಮತ್ತೆ ಬಳಿ ಸಾರಿ ಕಾಲಿಗೂ ಬೀಳುವರು
ಲಜ್ಜೆ ಮರೆತಾ ವಿಧೂಷಕರು!

ನಿನ್ನ ಪರಮಾಧಿಕಾರವವನು
ಕಸಿದು ಓಡಿ ಹೋದ ಮೇಲೆ
ತಿರುಗಿಯೂ ನೋಡದೀ ಮತಿಹೀನರು
ಮತ್ತದೇ ಆಟವ ಹೂಡುವರು;ಹೊಸ ರೂಪದಲಿ!
ನೀನು ಮಾತ್ರ ಅವತಾರ ಮುಗಿಸದೇ
ಹೀಗೆಯೇ ಇರು,ಬದಲಾಗ ಬೇಡ!
ಏಕೆಂದರೇ ನೀನೂ....ಅವನೇ ತಾನೆ?
--------------------------------
              -ಬನವಾಸಿ ಸೋಮಶೇಖರ್.

Monday 8 August 2011

ರವಿ ಮೂರ್ನಾಡು ಅವರ " ಹೆಚ್ಚೆಂದರೆ ನಾನು.........." ಎಂಬ ಕವಿತೆ


" ಚಿಂದಿ ಆಯುವ ಹುಡುಗನ ಜೀವನ ಗಾಥೆಯನ್ನು ಭಾವಾತ್ಮಕವಾಗಿಯೂ ಚಿಂತನಾತ್ಮಕವಾಗಿಯೂ ಎಳೆ ಎಳೆಯಾಗಿ ಬಿಡಿಸಿ ಹೇಳುವ ಕವಿ ತನ್ನ ಮನಸ್ಸಿನಾಳದಲ್ಲಿ ಹುದುಗಿರುವ ದುಗುಡವನ್ನು ಹಗುರಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಆ ಹುಡುಗನ ವಾಸ್ತವ ಬದುಕಿನ ನೈಜ ಚಿತ್ರಣವನ್ನು ವಿಷಧೀಕರಿಸುವ ರೀತಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ.
ಭಿಕ್ಷುಕನ ನೈಜ ಸ್ಥಿತಿಯನ್ನು ಅನಾವರಣ ಮಾಡುತ್ತಾ,ಕರುಣೆಯಿದ್ದರೆ ಕಣ್ಣೆತ್ತಿ ನೋಡಿ ಬಿಡಿಗಾ...ಸು ಹಾಕಿ ನನಗೂ ಬದುಕನ್ನು ನೀಡಿರೆಂದು ಗೋಗರೆಯುವ ಮನೋಬಾವ ಕರುಣಾಜನಕವಾಗಿದೆ.
ಒಪ್ಪೊತ್ತಿನ ತುತ್ತಿಗಾಗಿ ನೀವು ಬಿಸಾಕಿದ ಎಂಜಲೆಲೆಗೆ ಹಕ್ಕಿಯಂತೆ ಹಾರಿ ಮುತ್ತಿಕ್ಕಲು ಬಂದಿದ್ದೇನೆ ಎನ್ನುವಾಗಿನ ಚಟಪಡಿಕೆ ಹ್ರದಯ ವಿದ್ರಾವಕವಾಗಿದೆ.ತನ್ನ ಕೆದರಿದ ಕೂದಲು,ಜಿಡ್ಡುಗಟ್ಟಿದ ಕೊಳೆ,ಕುರುಚಲು ಗಡ್ಡವನ್ನು ನೋಡಿ ಅಸಹ್ಯಪಡದೇ ಹ್ರದಯ ತುಂಬಿದರೆ ನನ್ನಬಗ್ಗೆ ಕರುಣೆದೋರಿ ತುತ್ತು ಹಾಕಿರೆನ್ನುವಾಗಿನ ದ್ರಶ್ಯ ಮನಕಲಕುವುದು.
ಯಾರ ಮನ ಸಂತೋಷಕ್ಕೆ,ಅಸಹಾಯಕತೆಯ ಹಾದರಕ್ಕೆ ನನ್ನ ಜನ್ಮವಾಗಿಯೋ ನಾ ಕಾಣೆ;ಅಕ್ಕರೆ-ಕಕ್ಕುಲತೆಗಳಿಂದ ವಂಚಿತನಾದರೂ ಅನಾಥಾಶ್ರಮದ ನೆರಳಿನಲ್ಲಿ ಬೆಳೆಯುತ್ತಿರುವ ಬಾಲಕ ನಾನು ಎಂದು ತನ್ನ ಬಗ್ಗೆ ಪರಿಚಯಿಸಿಕೊಳ್ಳವ ಅನಾಥ ಬಾಲಕ,ತನ್ನನ್ನು ನಿರ್ಲಕ್ಷ್ಯ ಮಾಡದೇ ಸಹಾನುಭೂತಿ,ಅನುಕಂಪ ತೋರಿ ಕಾಪಾಡಿರೆನ್ನುವ ಕೂಗು ಹ್ರದಯ ಚುಚ್ಚುವುದು.
ಹುಟ್ಟಿದ ತಪ್ಪಿಗೆ, ಹೊಟ್ಟೆಯ ಪಾಡಿಗಾಗಿ ನನ್ನ ಅಸಹಾಯಕತನವನ್ನೇ ಬಂಡವಾಳ ಮಾಡಿಕೊಂಡು ನಿಮ್ಮ ಬಳಿಸಾರಿದ್ದೇನೆ.ಈ ನನ್ನ ದೈನ್ಯೇಸಿ ಸ್ಥಿತಿಗಾಗಿ ಕೋಪಿಷ್ಠರಾಗದೇ,ಮನ ಬಂದಂತೆ ನನ್ನ ದೂಷಿಸದೇ ಪ್ರೀತಿ ತೋರಿ ನನ್ನನ್ನೂ ಮನುಷ್ಯನನ್ನಾಗಿ ನೋಡಿರೆಂದು ನಿವೇದಿಸುವ ಬಾಲಕನ ಕೂಗು ಅರಣ್ಯರೋದನವೆನಿಸುವದು.
ಶೋಷಣೆ,ಅನ್ಯಾಯ,ದೌರ್ಜನ್ಯ ಮತ್ತು ತುಳಿತಕ್ಕೊಳಗಾದ ನಾನು ಆಕಸ್ಮಿಕವಾಗಿ ನಿಮ್ಮ ನಡುವಿರುವೆ.ನಿಮ್ಮ ಮುಂದೆ ನಾನು ಕೇವಲ ಭಿಕ್ಷುಕ,ಚಿಂದಿ ಆಯುವ ಹಡುಗ,ಅನಾಥ,ದೇವರ ಗುಲಾಮ ಎಂದೆಲ್ಲಾ ತನ್ನ ಪರಿಚಯ ಮಾಡಿಕೊಳ್ಳವ ಈ ದೀನ ಬಾಲಕನ ತನ್ನ ಹುಟ್ಟಿಗೆ ಯಾವುದೇ ಹೆಚ್ಚುಗಾರಿಕೆ ಇಲ್ಲ.ಕರುಣೆ,ಹ್ರದಯ,ಮನಸ್ಸಿದ್ದರೆ ಈ ಬದುಕು ಸಾರ್ಥಕಗೊಳ್ಳಲು ಕೈ ಹಿಡಿದು ಮುನ್ನಡೆಸಿ,ನನ್ನನ್ನು ನಿಮ್ಮಲೊಬ್ಬನ್ನಾಗಿ ಸ್ವೀಕರಿಸಿ ಎಂದು ಹೇಳುವಾಗ ಎಂಥ ಕಠೋರ ಮನಸ್ಸಾದರೂ ಕರಗಿ ನೀರಾಗುವುದು ಎಂಬ ಆಶಯವನ್ನು ಕವಿ ಮೂರ್ನಾಡರು ಅರ್ಥಗರ್ಭಿತವಾಗಿ,ಹ್ರದಯ ವಿದ್ರಾವಕವಾಗಿ 'ಹೆಚ್ಚೆಂದರೆ ನಾನು ...'ಕವಿತೆಯಲ್ಲಿ ಬಿಂಬಿಸಿರುವರು."ನನ್ನ ಈ ಎಲ್ಲಾ ಅನಿಸಿಕೆಗಳು ಅವರ ಆಶಯಕ್ಕೆ ಖಂಡಿತಾ ನ್ಯಾಯ ಒದಗಿಸುವುದಿಲ್ಲ.ನೀವೆ ಓದಿ ಆಸ್ವಾದಿಸಿ ಪ್ರತಿಕ್ರಿಯೆ ನೀಡಬಹುದು.
--ಬನವಾಸಿ ಸೋಮಶೇಖರ್.
ನೋಡಿ.http://ravimurnad.blogspot.com​/2011/04-post

ಕೆದರಿದ ಕೂದಲು-ಕುರುಚಲು ಗಡ್ಡ
ಜಿಡ್ಡು-ಕೊಳೆ ಮೆತ್ತಿಕೊಂಡ
ಭಿಕ್ಷುಕನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ತಿರುಗಿಸಿಕೊಳ್ಳದಿರಿ ಹೃದಯಗಳೇ
ಕರುಣೆಯಿದ್ದರೆ ಕಣ್ಣೆತ್ತಿ ನೋಡಿ
ಚಿಲ್ಲರೆಯಿದ್ದರೆ ಪುಡಿಗಾಸು ಹಾಕಿ
ಹೆಚ್ಚೆಂದರೆ ನಾನೂ ಒಬ್ಬ ಭಿಕ್ಷುಕ !


ಒಂದು ಹೊತ್ತಿನ ಅನ್ನದ ಆಸೆಗೆ
ಗೂಡಿನಿಂದ ಹಾರಿಬಂದ ಹಕ್ಕಿಯತೆ
ನೀವು ಬಿಸಾಕಿದ ಎಂಜಲೆಲೆಗೆ ಮುತ್ತಿಕೊಂಡ
ಚಿಂದಿ ಆಯುವ ಹುಡುಗರ ಬಗ್ಗೆ ಕವಿತೆ ಬರೆಯುತ್ತೇನೆಂದು
ಅಸಹ್ಯ ಪಡದಿರಿ ಹೃದಯಗಳೇ
ಎದೆತುಂಬಿ ಬಂದರೆ ಕಣ್ಣೀರು ಸುರಿಸಿ
ಅನ್ನವಿದ್ದರೆ ಕರೆದು ತಿನ್ನಿಸಿ
ಹೆಚ್ಚೆಂದರೆ ನಾನೂ ಒಬ್ಬ ಚಿಂದಿ ಆಯುವ ಹುಡುಗ..!

ಯಾರದೋ ತೃಪ್ತಿಯ ಸ್ಪರ್ಶಕೆ
ಬದುಕು ಸವೆಸಿದ ಹಾದರಕೆ ಹುಟ್ಟಿದ
ಮಮತೆ-ವಾತ್ಸಲ್ಯ ವಂಚಿತ
ಅನಾಥಾಶ್ರಮದ ಮಗುವಿನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ಸಿಂಡರಿಸಿದರಿ ಹೃದಯಗಳೇ
ಮನಸ್ಸಿದ್ದರೆ ಪ್ರೀತಿ ನೀಡಿ
ನಿಮ್ಮಲ್ಲಿದ್ದರೆ ಮಮತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ಅನಾಥಾಶ್ರಮದ ಬಾಲಕ ..!


ಹುಟ್ಟಿದ ತಪ್ಪಿಗೆ ಹೊಟ್ಟೆಯ ಚಿಂತೆ
ಅಸಹಾಯಕತೆಯೇ ಬಂಡವಾಳ
ಶ್ರೀಮಂತರ ಮುಂದೆ ಕೈಕಟ್ಟಿ ನಿಂತ
ಗುಲಾಮರ ಬಗ್ಗೆ ಕವಿತೆ ಬರೆಯುತ್ತೇನೆಂದು
ಹುಬ್ಬು ಗಂಟಿಕ್ಕದೀರಿ ಹೃದಯಗಳೇ
ಮಾನವರಾದರೆ ಮಾನವೀಯತೆ ಇರಲಿ
ಸಾಧ್ಯವಾದರೆ ಸಮಾನತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ದೇವರ ಗುಲಾಮ..!

ಹದಿ ಹರೆಯದ ತುಡಿತಗಳ ಬಗ್ಗೆ
ಕಾಮ-ಪ್ರೇಮದ ಕನಸುಗಳ ಬಗ್ಗೆ
ಸ್ವಾರಸ್ಯಕರ ಕವಿತೆ ಕವಿತೆ ಬರೆಯುತ್ತೇನೆಂದು
ಬೆನ್ನ ತಟ್ಟದಿರಿ ಹೃದಯಗಳೇಹಾದಿ ತಪ್ಪದಂತೆ ಬೆಳಕ ನೀಡಿ
ಬದುಕ ಸಾರ್ಥಕತೆಗೆ ಹಿತನುಡಿಯಾಡಿ
ಹೆಚ್ಚೆಂದರೆ ನಾನೂ ನಿಮ್ಮವರಲ್ಲೊಬ್ಬ...!