Wednesday 28 December 2011

ನೆನಪಿನ ಬುತ್ತಿಯಿಂದ:ಬನವಾಸಿಯ ಕೊಟ್ರೇಶಪ್ಪ ಗುರು ಬಸಪ್ಪ ದಾವಣಗೆರೆ.

ನಮ್ಮೂರ ಹಿರಿಯ ಜೀವಗಳಲ್ಲಿ ಒಂದಾಗಿದ್ದ ಶ್ರೀ ಕೊಟ್ರಪ್ಪ ಗುರು ಬಸಪ್ಪ ದಾವಣಗರೆ ಇವರು ಇಂದು ಬೆಳಗಿನ ಜಾವ 4:40 ರ ಹೊತ್ತಿನಲ್ಲಿ ಇನ್ನಿಲ್ಲವಾದರೆಂಬ ಸುದ್ಧಿ ಅವರ ಮಗ ಮಹೇಶ ಅವರ ಮೊಬೈಲ್ ಸಂದೇಶದ ಮೂಲಕ ಗೊತ್ತಾದಾಗ ಒಂದು ಕ್ಷಣ ಮೂಕನಾದೆ!ಕೆ.ಜಿ.ದಾವಣಗೆರೆಯವರು ನನ್ನ ಮನಸ್ಸಲ್ಲಿ ಸದಾಕಾಲ ಇರುವ ವ್ಯಕ್ತಿಯಾಗಿದ್ದರು.ನನ್ನ ಬದುಕಿನ ಹಲವು ಸಾಧನೆಗಳ ಮುನ್ನೋಟಕ್ಕೆ ಅವರು ಮಾರ್ಗದರ್ಶಿಯಾಗಿದ್ದರು.ಒಂದು ಕಾಲದಲ್ಲಿ ಬನವಾಸಿ ಸೀಮೆಯಲ್ಲಿ ವ್ಯಾಪಾರ- ವಹಿವಾಟು,ವಾಣಿಜ್ಯೋದ್ಯಮ ಮುಂತಾದ ವ್ಯವಹಾರಗಳಲ್ಲಿ ಶ್ರೀಯುತರು ಎತ್ತಿದ ಕೈಯಾಗಿದ್ದರು.ತುಂಬಾ ಬುದ್ಧಿವಂತರೂ ತೀಕ್ಷ್ಣ ದೃಷ್ಠಿಯುಳ್ಳವರೂ ಉತ್ತಮ ಸಂವಹನಶೀಲರೂ ಆಗಿದ್ದ ಅವರು ಬನವಾಸಿಯಲ್ಲಿ ತಮ್ಮದೇ ಆದ ಒಂದು ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರು.ನನಗೆ ಗೊತ್ತಿದ್ದಂತೆ ಬನವಾಸಿಯಲ್ಲಿ ಪ್ರಥಮ ಬಾರಿಗೆ ಅವಲಕ್ಕಿ ಮತ್ತು ಶೇಂಗಾ ಎಣ್ಣೆಯ ಗಿರಣಿಯನ್ನು ಪ್ರಾರಂಭಿಸಿ ಬನವಾಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಶ್ರೇಯಸ್ಸು ಅವರದು.ಚುರುಕುತನದ ಬುದ್ಧಿವಂತಿಕೆಯ ವ್ಯಾಪಾರ ಜಾಣ್ಮೆಯು ಅವರ ಕುಟುಂಬವನ್ನು ಉನ್ನತಿಗೆ ತಂದಿತ್ತು.ಒಬ್ಬ ಯಶಸ್ವಿ ವ್ಯಾಪಾರೋದ್ಯಮಿಯಾಗಿದ್ದ ಅವರು ಕಾಲಬದಲಾದಂತೆ ಹಿನ್ನಡೆ ಅನುಭವಿಸಿದ್ದರು.ಅವರ ಚಿನ್ನದಂತ ಮಗ ಮಧು ಅಕಾಲಿಕ ಮರಣಕ್ಕೆ ತುತ್ತಾದ ಮೇಲಂತೂ ಅವರ ಇಡೀ ಕುಟುಂಬದ ಜಂಘಾಬಲವೇ ಉಡುಗಿ ಹೋಗಿತ್ತು.ಆತ 9ನೇ ತರಗತಿಯಲ್ಲಿದ್ದಾಗ ಶಿವರಾತ್ರಿಯ ಸಂದರ್ಭದಲ್ಲಿ ನಮ್ಮೂರ ವರದಾ ನದಿಯಲ್ಲಿ ಓರಿಗೆಯವರೊಂದಿಗೆ ಈಜಾಟಕ್ಕೆ ಹೋಗಿ ನೀರುಪಾಲಾದ ಸನ್ನಿವೇಷವನ್ನು ನೆನಸಿಕೊಂಡರೆ ಕರುಳು ಕಿತ್ತು ಬರುತ್ತದೆ.ಅತ್ಯಂತ ಬುದ್ಧಿವಂತ, ಚುರುಕಾದ ಮಧು ಸ್ವಭಾವತಃ ಸ್ನೇಹಶೀಲ,ಉದಾರ ಮನೋಭಾವನೆಯ ಸುರದೃಪಿ ಹುಡುಗನಾಗಿದ್ದ.ಅವನ ಸ್ಮರಣೆಗಾಗಿ ಗುಡ್ನಾಪುರದಲ್ಲಿನ ಪ್ರೌಢ ಶಾಲೆಗೆ  ಆತನ ಹೆಸರನ್ನು ಇಡಲಾಗಿದೆ.ಮಧು ಅಗಲಿದ ನಂತರ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಹೆಸರುವಾಸಿಯಾಗಿದ್ದ ಅವರ ಅಮ್ಮ ಮಂಗಳಾ ಅವರು ಸಾರ್ವಜನಿಕ ಜೀವನದಿಂದ ದೂರವಾದರು.ತಮ್ಮ ಉಳಿದ ಒಬ್ಬನೇ ಹಿರಿಮಗ ಮಹೇಶನ ಉತ್ಕರ್ಷೆಗೆ ಟೊಂಕಕಟ್ಟಿ ನಿಲ್ಲಬೇಕಾಯಿತು.ಮನೆತನದ ಹೊಣೆಗಾರಿಕೆ ಹಾಗೂ ಮಗನ ಭವಿಷ್ಯ ರೂಪಿಸುವುದಕ್ಕಾಗಿ ಮಂಗಳಮ್ಮನವರು ತಮ್ಮನ್ನು ಮುಡಿಪಾಗಿಸಿಕೊಂಡರು.ಅದಕ್ಕಾಗಿ ಅವರು ಕೆಲಕಾಲ ತಮ್ಮ ತವರು ಮನೆಯತ್ತ ಹೋಗಿ ಮಹೇಶನ ವಿದ್ಯಾಭ್ಯಾಸವೆಲ್ಲ ಮುಗಿದ ನಂತರ ವಿವಾಹ ನೆರವೇರಿಸಿ ಮಗನೊಂದಿಗೆ ವಾಸವಾಗಿದ್ದು ಬನವಾಸಿಗೆ ಬಂದು-ಹೋಗಿ ಮಾಡುತ್ತಿದ್ದರು.

ಇತ್ತ ಕೊಟ್ರೇಶಣ್ಣನವರು ಬನವಾಸಿಯಲ್ಲಿಯೇ ಉಳಿದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.ಮೊದಲಿನಿಂದಲೂ ನಾನು ಶ್ರೀಯುತರ ಕುಟುಂಬದೊಂದಿಗೆ ಸ್ನೇಹ-ಸಂಪರ್ಕಹೊಂದಿದ್ದೆ.ನನ್ನ ಬಗ್ಗೆ ಇಡೀ ಕುಟುಂಬಕ್ಕೆ ಒಲವಿತ್ತು.ನನಗಾದರೋ ಅವರ ಬಗ್ಗೆ ವಿಶೇಷ ಅಭಿಮಾನ ಮತ್ತು ಖಾಳಜಿ ಇದ್ದುದೇಕೋ ನನಗೆ ತಿಳಿಯದು.ಯಾವ ಜನ್ಮದ ಸಂಬಂಧವೋ ಅದು! ಮಧು ಮತ್ತು ಕಿರಿ ಗೆಳೆಯ ಮಹೇಶ ಇಬ್ಬರಿಗೂ ನಾನು ಹತ್ತಿರದವನಾಗಿದ್ದೆ.ಬಾಲ್ಯದಲ್ಲಿ ನಾ ಮಧುಗೆ ಸೈಕಲ್ ಕಲಿಸಿದ ನೆನಪೂ ಇನ್ನೂ ಮಾಸಿಲ್ಲ.

ಅಗಲಿರುವ ಕೊಟ್ರೇಶಣ್ಣನವರು ನನ್ನ ಜೀವನದಲ್ಲಿ ಎಂದಿಗೂ ನೆನಪಾಗಿ ಉಳಿಯುವ ವ್ಯಕ್ತಿಯಾಗಿದ್ದಾರೆ.ಹತ್ತಾರು ವಿಷಯ,ವಿಚಾರಗಳಲ್ಲಿ ಅವರು ನನಗೆ ಮಾರ್ಗದರ್ಶಿಯಾಗಿ ಸ್ಪೂರ್ಥಿ ತುಂಬಿದ್ದರೆಂದು ಹೆಮ್ಮೆಯಿಂದ ಹೇಳಿಕೊಳ್ಳ ಬಲ್ಲೆ.ನನ್ನಲ್ಲಿನ ಛಲ,ಧೈರ್ಯ,ಬುದ್ಧಿವಂತಿಕೆ,ಸಾಹಸ ಪ್ರವೃತ್ತಿ,ಹೋರಾಟದ ಮನೋಭಾವ,ವಿಧೇಯತೆ ಇತ್ಯಾದಿ ಗುಣಗಳನ್ನು ಗುರುತಿಸಿದ್ದ ಅವರು ನನ್ನ ಏಳ್ಗೆ ಬಯಸುತ್ತಿದ್ದರು.ನನ್ನ ವಿದ್ಯಾ ಶ್ರಮವನ್ನು ಕೊಂಡಾಡುತ್ತಿದ್ದರು.ನೀನು ಬನವಾಸಿಯಲ್ಲಿದ್ದು ಸಾಧಿಸುವುದೇನಿದೆ?ಅಭಿಶಂಕರ್ ಅವರಂತೆ ಏನಾದರೂ ಮಾಡುವ ಶಕ್ತಿ ನಿನ್ನಲ್ಲುಂಟು.ಹೀಗಾಗಿಯೇ ನಿನ್ನನ್ನು ಅವರು ಗುರುತಿಸಿ ಜತನದಿಂದ ಕಾಪಾಡುತ್ತಿರುವರು.ಊರಿಗೆ ಉಪಕಾರ ಮಾಡೋದು ಹೆಣಕ್ಕೆ ಶೃಂಗಾರ ಮಾಡಿದಂತೆ.ಇಲ್ಲಿದ್ದು ಪುಡಾರಿ(ರಾಜಕಾರಣಿ)ಯಾಗುವುದಕ್ಕಿಂತ ಸರ್ಕಾರದ ಉನ್ನತ ಹುದ್ದೆಗೆ ಸೇರಿ ಆಗ ಊರ ಸೇವೆ ಮಾಡುವುದರಲ್ಲಿ ನಿನ್ನ ಶ್ರೇಯಸ್ಸಿದೆ ಎನ್ನುತ್ತಿದ್ದರು.

ನಾನು ಮತ್ತು ನನ್ನ ಆತ್ಮೀಯ ಗೆಳೆಯ ಪ್ರಕಾಶ ಹೆಗಡೆ ಇಬ್ಬರೂ ಕೊಟ್ರೇಶಣ್ಣನವರ ಮನೆಗೆ ಪ್ರತಿ ದಿನ ಸಂಜೆ ತಪ್ಪದೇ ಭೇಟಿ ನೀಡುತ್ತಿದ್ದೆವು.ಹಿರಿಯರಾದ ಅವರು ಅಪಾರ ಜೀವನಾನುಭವ ಹೊಂದಿದ್ದರು.ನಾನು ಯಾವುದೇ ವಿಷಯದೊಂದಿಗೆ ಚರ್ಚೆ ಮಾಡಿ ಮಹತ್ತರವಾದುದನ್ನು ಹೆಕ್ಕಿ ತೆಗೆಯುವ ಸ್ವಭಾವದವನು.ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ-ಕೆದಕುತ್ತಿದ್ದೆ.ಅವರು ನೀಡುವ ಉತ್ತರ,ಜಾಣ್ಮೆಯ ಮಾತುಗಳು ನಮ್ಮನ್ನು ಆಕರ್ಷಿಸುತ್ತಿತ್ತು.ಅದು 1993-94ನೇ ಇಸ್ವಿಯಾಗಿರಬೇಕು,ಊರಲ್ಲಿ ಶ್ರೀಮಂತರು-ಬಡವರು,ಕೊಟ್ರೇಶಣ್ಣ ಎಲ್ಲರೂ ಸೇರಿ 4-5 ಕುಟುಂಬಗಳಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತೆಂಬುದು ತಿಳಿದಿತ್ತು.ಅಂಥ ಸಂದರ್ಭದಲ್ಲಿ ಸೋಮು,ಪ್ರಕಾಶ ನೀವೇಕೆ ನಿಮ್ಮ ನಿಮ್ಮ ಮನೆಗೆ ದೂರವಾಣಿ ಸಂಪರ್ಕ ಪಡೆದುಕೊಳ್ಳಬಾರದು?ನಿಮ್ಮ ಬುದ್ಧಿ ವಿಕಾಸಗೊಳ್ಳಲು,ಸಂಪರ್ಕ ಬೆಳೆಯಲು ಅದು ಅವಶ್ಯಕ.ದುಡ್ಡು ಬರುತ್ತೆ ಹೋಗುತ್ತೆ.ಬಿಲ್ಲನ್ನು ಕಟ್ಟುವ ಜಾಣ್ಮೆ ನಿಮಗಿದೆ.ಸೋಮು ಬಡತನವೆಂದು ಕೊರಗಬೇಡ.ಮೆಟ್ಟಿ ನಿಲ್ಲುವ ಶಕ್ತಿ ನಿನಗುಂಟು.ನಾಳೆಯೇ ಅರ್ಜಿ ಸಲ್ಲಿಸಿ ಮನೆಗೊಂದು ದೂರವಾಣಿ ಹಾಕಿಸಿಕೊಳ್ಳಿ ಎಂದರು.ನಾವು ಹಿಂದೆ-ಮುಂದೆ ನೋಡದೇ ಹಾಗೆಯೇ ಮಾಡಿದೆವು.ಇಂದಿಗೂ ಆ ದೂರವಾಣಿಯು ಕೊಟ್ರೇಶಣ್ಣನವರನ್ನು ನೆನಪು ಮಾಡುತ್ತದೆ.

ನನ್ನ ವಿದ್ಯಾಭ್ಯಾಸ ಎಲ್ಲಾ ಮುಗಿದು ಸರ್ಕಾರಿ ಸೇವೆಗೆ ಸೇರಿ ವಿವಾಹಯೋಗವೂ ಒದಗಿ ಬಂದು ಅವರಿಗೂ ಆಮಂತ್ರಣ ನೀಡಿದ್ದೆ.ಅವರು ಸೊರಬದ ಉಳವಿಯಲ್ಲಿ ನಡೆದ ವಿವಾಹಕ್ಕೆ ಬಂದಿರಲಿಲ್ಲ.2-3ದಿನ ಬಿಟ್ಟು ಮನೆಗೆ ಬಂದು ಹರಸಿದರು.ಆಗ ನಮ್ಮ ಸಣ್ಣ ಹಂಚಿನ ಮನೆಯನ್ನೆಲ್ಲಾ ಒಮ್ಮೆ ಕಣ್ಣಾಡಿಸಿ ಸೋಮು ಏನು ನೀನು,ಈ ಮನೆಯಲ್ಲಿ ಗಾಳಿ-ಬೆಳಕು ಸರಿಯಾಗಿ ಬರುತ್ತಿಲ್ಲ.ಗಾಳಿ ಬೆಳಕು ಇಲ್ಲದ ಮನೆ ಸಮಸ್ಯೆಗಳ ಆಗರವಾಗುವುದು.ತಡಮಾಡದೇ ಈ ಮನೆಯನ್ನು ಕೆಡವಿ ಯೋಗ್ಯತೆಯನುಸಾರ ಹೊಸ ಮನೆ ಕಟ್ಟು ಅಂದರು.ನಾನು ನೀವು ಹೇಳಿದ್ದು ಏನು ಮಾಡಿಲ್ಲ ಹೇಳಿ ಎಂದೆ.ಅಷ್ಟೇ ಮದುವೆಯಾಗಿ ಮೂರು ವರ್ಷಕ್ಕೇ ಗುಡಿಸಲನ್ನು ನೆಲಸಮ ಮಾಡಿ ಬ್ಯಾಂಕ್ ಸಾಲ ಪಡೆದು ಹಂತ ಹಂತವಾಗಿ ಕಟ್ಟುತ್ತಾ ಪುಟ್ಟದೊಂದು ಮನೆ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.ಗೃಹ ಪ್ರವೇಶ ಮಾಡಿ ವಾಸವಾಗಿರಬೇಕು ಅನ್ನುವಷ್ಟರಲ್ಲಿ ಮಗ ಮಹೇಶನಿಂದ ಇಂದು ಅವರ ಸಾವಿನ ಸುದ್ಧಿ ಕೇಳಿದೆ.ಈಗಲೂ ಮನೆಯನ್ನು ನೋಡಿದಾಕ್ಷಣ ಈ ಮನೆ ಕಟ್ಟಲು ಕೊಟ್ರೇಶಣ್ಣನವರೇ ಸ್ಪೂರ್ಥಿಯೆಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ.
ನಮಗೂ ಮತ್ತು ಎಲ್ಲ ಮಾನವರಲ್ಲೂ ಇರುವಂತೆ ಕೊಟ್ರೇಶಣ್ಣನವರಲ್ಲೂ ಹಲವು ದೌರ್ಭಲ್ಯಗಳಿದ್ದವು.ಆ ದೌರ್ಭಲ್ಯಗಳೇ ಅವರ ಕೊನೆಗಾಲದಲ್ಲಿ ಅವರನ್ನು ಚಿಂತೆಗೀಡುಮಾಡಿರುವುದಂತೂ ಸತ್ಯ.ಅಂತ ಕೆಲ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು.ಅದೇನೇ ಇದ್ದರೂ ನಾವು ಅವರನ್ನು ಮರೆಯಲು ಸಾಧ್ಯವಿಲ್ಲ.ನಾನು ಮತ್ತು ಗೆಳೆಯಾ ಪ್ರಕಾಶ ಭೇಟಿಯಾದಾಗಲೆಲ್ಲ ಅವರೊಡನೆ ಆಳವಾದ ಚಿಂತನ-ಮಂಥನ ನಡೆಸುತ್ತಿದ್ದೇವು.ನನ್ನ ಬಡತನವಾಗಲೀ ಅವರ ಸಿರಿತನ-ವ್ಯಥೆಯಾಗಲೀ ಯಾವುದೂ ನಮ್ಮ ಬಾಂದವ್ಯಕ್ಕೆ ಅಡ್ಡಿಯಾಗಿರಲಿಲ್ಲ.ಜೀವನದಲ್ಲಿ ಒಮ್ಮೆಯೂ ಅವರಿಂದ ನಾ ಯಾವುದೇ  ಸಂಪನ್ಮೂಲ ಸಹಾಯ ಪಡೆದಿಲ್ಲ.ಅವರ ಜ್ಙಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾ ವಂಚಿತನಾಗಿಲ್ಲ. ಜೋತಿಷ್ಯ,ತತ್ವಜ್ಙಾನ,ಧರ್ಮಶಾಸ್ತ್ರಗಳಲ್ಲಿ  ಅವರಿಗೆ ಜ್ಙಾನವಿತ್ತು. ಹುಟ್ಟು ಸಾವು,ಜೀವನ,ಮದುವೆ,ಹೆಂಡತಿ,ಮಕ್ಕಳು ಇತ್ಯಾದಿ ಮನೋವೈಜ್ಙಾನಿಕ ಅಂಶಗಳ ಮೇಲೆ ಅವರು ಬೆಳಕು ಚೆಲ್ಲುತ್ತಿದ್ದರು.ಸರ್ವಜ್ಙನ ತತ್ವ ನುಡಿಗಳು ಅವರ ಬಾಯಲ್ಲಿ ನಲಿದಾಡುತ್ತಿದ್ದವು.
ಸೇವೆಗೆ ಸೇರಿ ಬನವಾಸಿ ಬಿಟ್ಟ ನಂತರ ಅವರೊಡನಿದ್ದ ಸಂಪರ್ಕ ಕಡಿಮೆಯಾಗುತ್ತಾ ಹೋಯಿತು.ಊರಿಗೆ ಹೋದಾಗ ಒಮ್ಮೊಮ್ಮೆ ಭೇಟಿ ನೀಡಿ ಆರೊಗ್ಯ ವಿಚಾರಿಸುತ್ತಿದ್ದೆ.ಮಂಗಳೂರಿಗೆ ಬಂದ ನಂತರ ಬನವಾಸಿ ಬಹಳ ದೂರವೆನಿಸಿದೆ.ಅವರು ಇನ್ನಿಲ್ಲವೆಂಬ ವಾರ್ತೆ ತಿಳಿದ ನಂತರ ತೇವಗೊಂಡೆ.ನನ್ನ ಮತ್ತು ಅವರೊಡನಿದ್ದ  ಆ ಸಂಪರ್ಕದಲ್ಲಿನ ಒಡನಾಟದ ಅನುಭವದ ಮಾತುಗಳ ಮೂಲಕ ಆ ಹಿರಿಯ  ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.
  
= ಬನವಾಸಿ ಸೋಮಶೇಖರ್,ಮಂಗಳೂರು.
   28-12-2011

1 comment: