Tuesday 20 December 2011

‎'ಕದಂಬ ವೈಭವ"

ವೈಜಯಂತಿ ಪುರದರಸ ಮಯೂರ ವರ್ಮನೆ
ಸಿರಿಗನ್ನಡಾಧಿಪತ್ಯ ಕಟ್ಟಿದ ಓ ದೊರೆಯೇ....
ಪಲ್ಲವರ ಸದೆಬಡಿದ ಕದಂಬ ಕುಲತಿಲಕ

ನೀ ಕರುನಾಡ ವೈಭವದ ವರಧಾತ!

ಛಪ್ಪನ್ನೈವತ್ತಾರು ದೇಶಗಳಲ್ಲೂ
ಹಬ್ಬಿತ್ತು ನಿನ್ನಯ ಕೀರ್ತಿ ಪತಾಕೆ
ಕರ್ನುಡಿಯ ತೊಟ್ಟಿಲ ತೂಗಿದ ಕಂದ ನೀ
ಜೋಗುಳದ ಹರಕೆಯನು ಮೆರೆಸಿದ ರಾಯನು.!!

ಹೂತು ಹೋಗಿದ್ದ ಕದಂಬ ವೈಭವದ
ಇತಿಹಾಸ ಕೆದಕಿದರು ಅಭಿಶಂಕರರು
ಹತ್ತೋಲೆ ಬರೆದರು ಹಗಲಿರುಳು ದುಡಿದರು
'ಲೋಕ ಧ್ವನಿ'ಯಾಗಿ ನಾಡನ್ನು ಬೆಳಗಿದರು.!!!

ವರದಾ ತೀರದಲಿ ನೆಲೆಸಿರುವ ಈಶ
ಪಾರ್ವತಿಯ ಪ್ರಾಣ ನೀ ಮಧುಕೇಶ
ಸಂಪನ್ನಗೊಂಡಿತು ಅಷ್ಟಬಂಧದಲಿ
ಮಧುಕೇಶ್ವರ ನಿನ ಮಹಿಮೆ ಬಲು ಹಿರಿಮೆ!!!

ಅಲ್ಲಮ್ಮ ಪ್ರಭುಗಳು ಮೆಟ್ಟಿದ ನಾಡು
ಹರ್ಡೇಕರ ಮಂಜಪ್ಪನವರು ಹುಟ್ಟಿದ ಊರು
ಚಾಮರಸರು ಪ್ರಭುಲೀಲೆ ಬರೆದರು
ಪಂಪಕಾವ್ಯ ಹಾಡಿತು-ಪಾಡಿತು!!!

ಕನ್ನಡ ಸಂಸ್ಕೃತಿಯ ತೊಟ್ಟಿಲು ಬನವಾಸಿ
ಪ್ರಾಚೀನ ಪ್ರಖ್ಯಾತಿ ಹೊಂದಿಹುದು ವೈಜಯಂತಿ
ಮಧು ಮಹೋತ್ಸವವು ಕದಂಬೋತ್ಸವವಾಗಿ
ಸಾಗುತಿಹುದು ನುಡಿತೇರು ಈ ಪರಿಯಾಗಿ!!!

ದತ್ತರಾಜ ಯೋಗೀಂದ್ರರು ತಪವ ಗೈದಿಹರು
ಸಿದ್ಧಲಿಂಗ ಸ್ವಾಮಿಗಳು ಶತಾಯುಷಿಗಳಾದರು
ಹಕ್ಕಲು ಮಾರಿಕಾಂಬೆ ನಾಡಲ್ಲಿ ನೆಲೆಸಿಹಳು
ಬನವಾಸಿ ಭಾಗ್ಯದಾ ಬನಸಿರಿಯೇ!!!!

   = ಬನವಾಸಿ ಸೋಮಶೇಖರ್.

4 comments:

  1. ಹಲವು ಕವಿತೆಗಳನ್ನು ಆಳಕ್ಕೆ ಓದಿ ಅದರ ಎಸಳುಗಳನ್ನು ನೀವು ಬಿಡಿಸಬಲ್ಲಿರಿ. ಅಂದರೆ ಓರ್ವ ಉತ್ತಮ ಓದುಗಾರ ಉತ್ತಮ ಸಾಹಿತ್ಯ ಮತ್ತು ಚಿಂತನೆಗೆ ಹಚ್ಚುವ ಬದಗಳನ್ನು ಸೃಷ್ಥಿಸಬಲ್ಲ. ತನ್ನೊಳಗೆ ತಾನೇ ಹಲವು ದಿಕ್ಕುಗಳಲ್ಲಿ ವಿಮರ್ಶಕನಾಗುವುದು. ಅದು ನಮ್ಮ ದಿನ ನಿತ್ಯದ ಬದುಕಿನಲ್ಲಿಯೂ ಇರುತ್ತವೆ. ಇಲ್ಲಿಯ ನಿಮ್ಮ ಕವಿತೆ ತುಂಬಾ ತಾಳ್ಮೆಯಿಂದ ಪದಗಳಲ್ಲಿ ಹೊರಬಂದಿದೆ. ಉತ್ತಮ ವೈಚಾರಿಕ ಸಾಹಿತ್ಯವನ್ನು ಅದ್ದಿ ತೆಗೆದಿದ್ದಿರಿ. ತುಂಬಾ ಚೆನ್ನಾಗಿದೆ. ಶುಭವಾಗಲಿ.

    ReplyDelete
  2. ಗತಕಾಲ ವೈಭವದ ನೆನಪುಗಳು...
    ಹಲವಾರು ರೀತಿಯ ಕಥೆಗಳು...
    ಮೊದಲೇ ಕೇಳಿದ್ದ ಹಲವು ವಿಚಾರಗಳು..
    ನಿಮ್ಮ ಕವಿತೆಯಲ್ಲಿ ಎಲ್ಲವೂ ಮತ್ತೊಮ್ಮೆ
    ಹೊಸದಾಗಿ ಕಾಣಲು .. ಆ ಪದಗಳ ಬಳಕೆ...
    ಮತ್ತು ನಮ್ಮ ನಾಟಕಗಳ ನೆನಪಿನ ದಿನಗಳಿಗೆ
    ನಿಮ್ಮ ಕವನದಲ್ಲಿ ಒಂದು ಪ್ರವಾಸ..
    ನೀವು ಹೇಳಿದ ಈ ಅದ್ಭುತ ಇತಿಹಾಸ...
    ಪ್ರತಿಕ್ರಿಯೆ ಮಾಡಲು ಮರೆತು ಆ ಕ್ಷಣ
    ಬರೆದೆವು ಮೆಚ್ಚುಗೆಯ ಭಾವನೆಗಳ ಬಿಡದೇ ಈ ದಿನ... :)

    ReplyDelete
  3. ಅದ್ಭುತವಾದ ಗಟ್ಟಿ ಕವಿತೆ ಸೋಮಣ್ಣ..:))) ಕದಂಬ ಕಾಲದ ಗತವೈಭವದೊಂದಿಗೆ ಬನವಾಸಿಯ ವೈಶಿಷ್ಠ್ಯಗಳನ್ನು ಮನಸ್ಸಿಗೆ ಮುಟ್ಟಿಸುತ್ತಾ ಕವಿತೆ ತೆರೆದುಕೊಳ್ಳುತ್ತಾ ಸಾಗುತ್ತದೆ.. ಕರ್ನಾಟಕದಲ್ಲಿ ಉಗಮವಾದ ಮೊತ್ತಮೊದಲ ಕನ್ನಡ ಸಾಮ್ರಜ್ಯವಾದ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಬನವಾಸಿ ತನ್ನ ಗತವೈಭವವನ್ನು ಹೇಗೆಲ್ಲಾ ಹೊಂದಿ ಕರ್ನಾಟಕ ಇತಿಹಾಸದಲ್ಲಿ ಕದಂಬ ಸಾಮ್ರಾಜ್ಯದೊಂದಿಗೆ, ಮಯೂರವರ್ಮನೊಂದಿಗೆ ಹಾಸುಹೊಕ್ಕಾಯಿತು ಎಂಬ ವಿವರಣೆ ಅದ್ಭುತವೆನಿಸುತ್ತದೆ.. ಬನವಾಸಿಯಲ್ಲಿ ಅರಳಿದ ಮುತ್ತು ರತ್ನದಂತಹ ವ್ಯಕ್ತಿತ್ವಗಳ ಪರಿಚಯವೂ ಕವಿತೆಗೆ ಮೆರುಗು ನೀಡಿದೆ.. "ಕದಂಬೋತ್ಸವದ" ಸಮಯದಲ್ಲಿ ಅರಳಿ ನಿಂತ ನಿಮ್ಮ ಕವಿತೆ ಸಾಂಕೇತಿಕವಾಗಿದ್ದು, ಕಾವ್ಯ-ಕವಿತೆಗಳು ಕ್ರಿಯಾಶೀಲವಾಗಿದ್ದು ಸಾಂದರ್ಭಿಕವಾಗಿ ಜನರ ಮನಸ್ಥಿತಿಗಳಿಗೆ ಸ್ಪಂದಿಸುತ್ತವೆ ಎಂಬ ಸತ್ಯವನ್ನು ಸಾರುತ್ತದೆ.. ಮನಸ್ಸಿನಲ್ಲುಳಿಯುವ ಗಟ್ಟಿ ಕವಿತೆ, ಬಹುವಾಗಿ ಮೆಚ್ಚಿದೆ..:)))

    ReplyDelete
  4. ಕವನವು ಕದಂಬರ ಐತಿಹ್ಯವನ್ನು ವಿಸ್ತಾರವಾಗಿ ಹೇಳಿದೆ. ಬನವಾಸಿಯವರ ಬನವಾಸಿಯ ಬಗೆಗಿನ ಒಲುಮೆ ಪ್ರಶಂಸನೀಯ.

    ಕದಂಬೋತ್ಸವ ಯಶಸ್ವಿಯಾಗಲಿ, ನನಗೂ ಭಾಗವಹಿಸುವ ಆಸೆ ಗರಿಗೆದರಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete